ಮುಂಬೈ (ಪಿಟಿಐ): ಪಶ್ಚಿಮ ಬಂಗಾಲ ಮತ್ತು ಬಿಹಾರದ ವಿಧವೆಯರು ಮಥುರಾದಲ್ಲಿ ನೆಲೆ ಕಂಡುಕೊಳ್ಳಬಾರದು ಎಂಬ ಸಂಸದೆ ಹೇಮಾಮಾಲಿನಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ವೃಂದಾವನ ವಿಧವೆಯರ ಬಗ್ಗೆ ಹೇಮಾಮಾಲಿನಿ ಅವರ ಹೇಳಿಕೆ ಸಂಕುಚಿತ ಮನೋಭಾವದಿಂದ ಕೂಡಿದೆ ಮತ್ತು ಅನಪೇಕ್ಷಿತವಾಗಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
‘ಎನ್ಜಿಒ ಸೇವೆಯ ಕೂಟ’ದ ಅಧ್ಯಕ್ಷೆ ಹಾಗೂ ವೃಂದಾವನದಲ್ಲಿ ‘ಅಮರ್ ಬರಿ ಆಶ್ರಮ’ ನಡೆಸುತ್ತಿರುವ ಮೋಹಿನಿ ಗಿರಿ ಅವರು ಹೇಮಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ ಮೂಲದ ‘ಮೈತ್ರಿ ಇಂಡಿಯಾ’ ಎನ್ಜಿಒದ ಮುಖ್ಯಸ್ಥೆ ಸೋನಾಲ್ ಸಿಂಗ್ ವಾಧ್ವಾ ಅವರೂ ಹೇಮಾ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷಮೆಗೆ ಆಗ್ರಹ: ತಮ್ಮ ಹೇಳಿಕೆ ಬಗ್ಗೆ ಸಂಸದೆ ಹೇಮಾಮಾಲಿನಿ ಅವರು ಮಥುರಾದ ವಿಧವೆಯರ ಕ್ಷಮೆ ಯಾಚಿಸಬೇಕು ಎಂದು ಬಿಹಾರದ ಸಮಾಜ ಕಲ್ಯಾಣ ಸಚಿವರಾದ ಲೇಸಿ ಸಿಂಗ್ ಆಗ್ರಹಿಸಿದ್ದಾರೆ.
ಸಂಸದೆಯಾಗಿ ಹೇಮಾಮಾಲಿನಿ ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿರುವ ಅವಮಾನ ಹಾಗೂ ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಹೇಮಾ ಸಮರ್ಥನೆ: ಮಥುರಾದಲ್ಲಿನ ವಿಧವೆಯರ ಬಗ್ಗೆ ಬುಧವಾರ ತಾವು ನೀಡಿರುವ ಹೇಳಿಕೆಯನ್ನು ಹೇಮಾಮಾಲಿನಿ ಸಮರ್ಥಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಲ ಮತ್ತು ಬಿಹಾರದಲ್ಲಿ ಸರ್ಕಾರ ವಿಧವೆಯರನ್ನು ನಿರ್ಲಕ್ಷಿಸಿದ್ದು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ತಮ್ಮ ನೆಲದಲ್ಲೇ ಅವರು ಘನತೆಯಿಂದ ಬದುಕುವಂತಾಗಬೇಕು ಎಂಬುದು ತಮ್ಮ ಹೇಳಿಕೆಯ ಆಶಯ ಎಂದು ಗುರುವಾರ ಟ್ವೀಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.