ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ನಿಷೇಧಿತ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಣ ನಡೆಸಿದ ಹೈದರಾಬಾದ್ ಮೂಲದ ‘ಪೋಟ್ರಿಯಾ’ ಕಂಪೆನಿಯ ಛಾಯಾಗ್ರಾಹಕನನ್ನು ವಶಕ್ಕೆ ಪಡೆಯಲು ಪೊಲೀಸರ ತಂಡವೊಂದು ಶೀಘ್ರವೇ ಹೈದರಾಬಾದ್ಗೆ ತೆರಳಲಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಛಾಯಾಗ್ರಾಹಕ ವೆಂಕಟೇಶ್ ಅಲಿಯಾಸ್ ವೆಂಕಿಯ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಭಾನುವಾರವೂ ಈತನ ಸಂಪರ್ಕಕ್ಕೆ ಪೊಲೀಸರು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಹೈದರಾಬಾದ್ನಲ್ಲಿರುವ ಕಂಪೆನಿಯ ಪ್ರಧಾನ ಕಚೇರಿಗೆ ತೆರಳಿ ಮಾಹಿತಿ ಕಲೆ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.
ವಿಡಿಯೊ, ಫೋಟೊಗಳಲ್ಲಿ ಇರುವ ನಿವೃತ್ತ ಐಎಎಸ್ ಅಧಿಕಾರಿ ನಂದಕುಮಾರ್ ಪುತ್ರ ಆದಿತ್ಯ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ, ಆದಿತ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಮತ್ತೊಂದು ತಂಡ ಬೆಂಗಳೂರಿಗೆ ತೆರಳಲಿದೆ.
ಈ ನಡುವೆ ಅಂಬಾವಿಲಾಸ ಅರಮನೆಯ ಆಡಳಿತ ಮಂಡಳಿ ಸಿಬ್ಬಂದಿಯ ವಿಚಾರಣೆ ಮುಂದುವರಿದಿದೆ. ಭಾನುವಾರವೂ ತನಿಖಾಧಿಕಾರಿ ಹಲವು ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದರು.