ನವದೆಹಲಿ(ಪಿಟಿಐ): ಕಳೆದ ವರ್ಷ ಹೈದರಾಬಾದ್ನ ದಿಲ್ಸುಖ್ನಗರದಲ್ಲಿ ನಡೆಸಲಾದ ಸ್ಫೋಟದ ಯೋಜನೆ ಮತ್ತು ಕಾರ್ಯದಲ್ಲಿ ತೆಹ್ಸಿನ್ ಅಖ್ತರ್ ಮತ್ತು ಜಿಯಾ–ಉರ್–ರೆಹಮಾನ್ ಅಲಿಯಾಸ್ ವಕಾಸ್ ಎಂಬ ಇಂಡಿಯನ್ ಮುಜಾಹಿದೀನ್ (ಐಎಂ) ಕಾರ್ಯಕರ್ತರು ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಲ್ಲಿ ಗುರುವಾರ ಕೋರ್ಟ್ ಎದುರು ಹೇಳಿದೆ.
ತೆಹ್ಸಿನ್, ವಕಾಸ್ ಇಬ್ಬರೂ ಫೆ.21ರಂದು ದಿಲ್ಸುಖ್ನಗರ ಸ್ಫೋಟ ಸೇರಿದಂತೆ ಅನೇಕ ಸ್ಫೋಟ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಆದ್ದರಿಂದ ಇವರಿಬ್ಬರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಎನ್ಐಎ ಹೈದರಾಬಾದ್ ಘಟಕ ಕೋರ್ಟ್ಗೆ ಮನವಿ ಮಾಡಿತು.
‘ಈ ಪಿತೂರಿ ಯೋಜಿಸುವಲ್ಲಿ ಮತ್ತು ಆಧುನಿಕ ಸ್ಫೋಟಕ ಸಾಧನ (ಎಲ್ಇಡಿ) ಸಂಗ್ರಹಿಸುವಲ್ಲಿ ವಕಾಸ್ ಸಕ್ರಿಯವಾಗಿ ಭಾಗವಹಿಸಿದ್ದ. ಸೈಕಲ್ಗೆ ಇವುಗಳನ್ನು ಜೋಡಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಎನ್ಐಎ ಹೇಳಿದೆ.
ವಶಕ್ಕೆ ಪಡೆದುಕೊಂಡು ನಡೆಸುವ ವಿಚಾರಣೆಯಿಂದ ಈಗಾಗಲೇ ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಅಲ್ಲದೇ ಗುರುತು ಪರೀಕ್ಷೆಯಂತಹ ತನಿಖೆಗಳ ಮೂಲಕ ಆರೋಪಿಗಳ ವಿರುದ್ಧ ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಲೂ ಸಾಧ್ಯವಾಗುತ್ತದೆ’ ಎಂದು ಎನ್ಐಎ ವಾದಿಸಿದೆ.