ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಮಾಡಬೇಕಾಗಿರುವ ಕೆಲಸವೆಂದರೆ ತಮ್ಮನ್ನು ಹೊಗಳುವ ‘ಭಜನಾ ಮಂಡಳಿ’ಯವರನ್ನು ಹೊರಗಿಡಬೇಕು. ಕಚೇರಿ ತುಂಬಾ ಇಂಥವರನ್ನು ತುಂಬಿಸಿಕೊಂಡು ದೊಡ್ಡ ತಪ್ಪು ಮಾಡಿದ್ದಾರೆ. ಇವರನ್ನೆಲ್ಲಾ ದೂರವಿಡಲು ಇದು ಸಕಾಲ’ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದರು.
ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ನಗರದ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅರ್ಕಾವತಿ ಬಡಾವಣೆಯ ಸತ್ಯ ಮತ್ತು ಮಿಥ್ಯೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಆರಂಭದಿಂದಲೇ ಈ ಪ್ರಕರಣದ ತನಿಖೆ ಮಾಡಿದರೆ ವಿರೋಧ ಪಕ್ಷದವರೇ ಹೆಚ್ಚು ಮಂದಿ ಜೈಲಿಗೆ ಹೋಗುತ್ತಾರೆ. ಸಾವಿರಾರು ಕೋಟಿ ಆಸ್ತಿ ಮಾಡಿಕೊಂಡಿರುವ ಬಂಧು ಬಳಗದವರು ಕಂಬಿ ಎಣಿಸಬೇಕಾಗುತ್ತದೆ. ಇಂಥವರಿಂದ ನಮಗೆ ಸರ್ಟಿಫಿಕೇಟ್ ಬೇಕಾ ಸ್ವಾಮಿ? ಅವರನ್ನು ದಶಕಗಳಿಂದ ನೋಡುತ್ತಿದ್ದೇನೆ. ‘ಹಣ ಹೊಡೆದಿದ್ದಾರೆ’ ಎಂಬ ಒಂದೂ ಆರೋಪವನ್ನು ನಾನು ಕೇಳಿಲ್ಲ. ಮೊದಲ ಬಾರಿ ಅವರ ಮೇಲೆ ಆರೋಪ ಎದುರಾಗಿದೆ’ ಎಂದರು.
‘ಅನ್ನದಲ್ಲಿ ಅಥವಾ ಬೇಳೆ ಸಾರಿನಲ್ಲಿ ಕಲ್ಲು ಹುಡುಕಿದರೆ ಪರವಾಗಿಲ್ಲ. ಆದರೆ, ಬಿಜೆಪಿ ಹಾಗೂ ಜೆಡಿಎಸ್ನವರು ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ. ಅವರ ಈ ನಡೆ ಹೊಸ ಕಳ್ಳನನ್ನು ಹುಡುಕಲು ಪೊಲೀಸರು ಹಳೆಯ ಕಳ್ಳನ ನೆರವು ಪಡೆದಂತಾಗಿದೆ. ಹಿಂದೆ ಲೂಟಿ ಮಾಡಿರುವ ಇವರಿಗೆ ಮುಂದಿನವರೂ ಹಣ ಮಾಡಿಕೊಳ್ಳುತ್ತಾರೆ ಎಂಬ ಆತಂಕ’ ಎಂದು ವ್ಯಂಗ್ಯವಾಡಿದರು.
ಸಿ.ಎಂ. ಎಚ್ಚೆತ್ತುಕೊಳ್ಳಬೇಕು: ‘ಸಿದ್ದರಾಮಯ್ಯ ಅವರಿಗೂ ಕೆಲ ಸಮಸ್ಯೆಗಳಿವೆ. ಅವರು ಸೂಕ್ಷ್ಮ ವ್ಯಕ್ತಿ. ಅಂತರ್ಮುಖಿ. ಇದು ಕೆಲವು ಸಲ ಒಳ್ಳೆಯದು, ಹಲವು ಬಾರಿ ಕೆಟ್ಟದು. ಮಾನಸಿಕ ಹಿಂಸೆಗೆ ಗುರಿಯಾಗಿದ್ದಾರೆ. ಸದಾ ಮುಖ ಗಂಟು ಹಾಕಿಕೊಂಡಿರುತ್ತಾರೆ. ಕೆಲ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಈ ಷಡ್ಯಂತ್ರಗಳಿಗೆ ಹರಕೆಯ ಕುರಿಯಾಗಬೇಡಿ. ಈಗಲಾದರೂ ಎಚ್ಚೆತ್ತುಕೊಳ್ಳಿ’ ಎಂದರು.
ಛೀಮಾರಿ ತಪ್ಪಿಸಲು ಸಹಿ: ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್, ‘ನ್ಯಾಯಾಂಗ ಸೂಚಿಸಿದ ಆರು ಮಾರ್ಗಸೂಚಿಗಳ ಅನ್ವಯ ಪರಿಷ್ಕೃತ ಯೋಜನೆಗೆ ಸಹಿ ಹಾಕುವ ಅನಿವಾರ್ಯ ಸಿದ್ದರಾಮಯ್ಯ ಅವರಿಗಿತ್ತು. ಆ ರೀತಿ ಮಾಡದೆ ಬೇರೆ ದಾರಿಯೇ ಇರಲಿಲ್ಲ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತಿತ್ತು. ಅಲ್ಲದೇ, ನ್ಯಾಯಾಲಯ ಛೀಮಾರಿ ಹಾಕುತ್ತಿತ್ತು. ಅಧಿಕಾರದಿಂದ ಕೆಳಗಿಳಿಯಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು’ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್.ಹನುಮಂತಯ್ಯ, ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿದರು. ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಇದ್ದರು.
ತೀರ್ಪಿನ ಅರಿವಿಲ್ಲ
ಪ್ರಕರಣದ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ವಿರೋಧ ಪಕ್ಷದವರಿಗೆ ಕೊಂಚವೂ ಅರಿವಿಲ್ಲ. ಆದರೆ, ಅವರೀಗ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಬುದ್ಧ ಚರ್ಚೆ ನಡೆಸಲು ಯಾರೂ ಮುಂದಾಗುತ್ತಿಲ್ಲ. ಬದಲಾಗಿ ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸಕ್ಕಿಳಿದಿದ್ದಾರೆ.
–ಕೋ.ಚನ್ನಬಸಪ್ಪ, ಹಿರಿಯ ಸಾಹಿತಿ
ಬಿಜೆಪಿಯವರಿಂದಲೇ ದಾಖಲೆ
ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಸದಾನಂದಗೌಡ ಹಾಗೂ ಯಡಿಯೂರಪ್ಪ ಭೂ ಹಗರಣದಿಂದ ಮುಕ್ತರಾಗಿದ್ದಾರೆಯೇ? ಅರ್ಕಾವತಿ ಬಡಾವಣೆ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲಿ ಏಕೆ ಇವರು ಪ್ರಸ್ತಾಪಿಸಲಿಲ್ಲ. ಇವರ ಹಗರಣಗಳ ಬಗ್ಗೆ ಬಿಜೆಪಿ ನಾಯಕರೇ ನನಗೆ ಕೆಲವು ದಾಖಲೆ ನೀಡಿದ್ದಾರೆ.
–ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.