ಮೊದಲೇ ಸಮರ್ಪಕ ಹಾಗೂ ಶುದ್ಧ ನೀರು ಕೊಡದೆ ಸತಾಯಿಸುತ್ತಿರುವ ಬೆಂಗಳೂರು ಜಲಮಂಡಳಿ ಈಗ ನೀರಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದೆ. ದರ ಪರಿಷ್ಕರಣೆ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಬಡವರ ಮೇಲೆ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಕಳಕಳಿ ಇಲ್ಲ ಎನ್ನುವುದು ವೇದ್ಯ.
ಕನಿಷ್ಠ ಶುಲ್ಕದಲ್ಲಿ ಶೇ 19ರಷ್ಟು ಹೆಚ್ಚಳವನ್ನಷ್ಟೇ ಮಾಡಲಾಗಿದೆ ಎನ್ನುವ ಅಸ್ಪಷ್ಟ ಲೆಕ್ಕವನ್ನು ಕೊಡುವ ಜಲಮಂಡಳಿ, ತಿಂಗಳ ನೀರಿನ ಬಿಲ್ ಮೇಲೆ ಆಗುವ ಒಟ್ಟಾರೆ ಪರಿಣಾಮದ ಬಗೆಗೆ ಜಾಣ ಮೌನ ವಹಿಸಿದೆ. ಇದುವರೆಗೆ ಮಾಸಿಕ ₨ 100ರಷ್ಟು ಬಿಲ್ ಪಾವತಿಸುತ್ತಿದ್ದ ಪ್ರತಿ ಗ್ರಾಹಕ, ನೀರು, ಒಳಚರಂಡಿ ಹಾಗೂ ಸೇವಾ ದರದಲ್ಲಿ ಆಗಿರುವ ಏರಿಕೆಯಿಂದಾಗಿ ಇನ್ನು ಮುಂದೆ ₨ 170ರಷ್ಟು ಶುಲ್ಕ ಭರಿಸಬೇಕಾಗುತ್ತದೆ.
ನಿಜ, ನೂರು ಕಿ.ಮೀ. ದೂರದಿಂದ ನೀರು ತಂದು ನಗರದ ಜನರಿಗೆ ವಿತರಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. ನಗರದ ಜಲಮೂಲಗಳಾಗಿದ್ದ ಕೆರೆಗಳನ್ನೆಲ್ಲ ಭೂಗಳ್ಳರು ನುಂಗಿ ನೀರು ಕುಡಿಯಲು ಬಿಟ್ಟ ತಪ್ಪಿಗಾಗಿ ದುಬಾರಿಯಾದ ಈ ಹೊಣೆಯನ್ನು ಹೊರಲೇಬೇಕಿದೆ. ಸೇವೆಯೇ ಮುಖ್ಯ ಗುರಿಯಾಗಬೇಕಾದ ಸಂಸ್ಥೆಗಳು ಸಹ ಲಾಭ–ನಷ್ಟದ ತಕ್ಕಡಿಯನ್ನು ಹಿಡಿದು ನಿಂತಾಗ ನಾಗರಿಕರೆಲ್ಲ ಗ್ರಾಹಕರಾಗಿ ಕಾಣುತ್ತಾರೆ. ಜೀವ ಜಲವೂ ಮಾರಾಟದ ಸರಕಾಗಿ ಗೋಚರಿಸುತ್ತದೆ.
ಕಳೆದ ಒಂಬತ್ತು ವರ್ಷಗಳಿಂದ ದರ ಪರಿಷ್ಕರಣೆಯನ್ನೇ ಮಾಡಿರಲಿಲ್ಲ ಎನ್ನುವುದು ಜಲಮಂಡಳಿ ಸಮರ್ಥನೆ. ರಾಜಕೀಯ ಕಾರಣಗಳಿಗಾಗಿ ಇದುವರೆಗೆ ಸುಮ್ಮನಿದ್ದು ಈಗ ಏಕಾಏಕಿ ದೊಡ್ಡ ಹೊರೆಯನ್ನು ಜನರ ಮೇಲೆ ಹೊರಿಸಿರುವ ಕ್ರಮ ನ್ಯಾಯಸಮ್ಮತವಲ್ಲ; ಸಮರ್ಥನೆಗೂ ಅರ್ಹವಲ್ಲ.
ಜಲ ಸಂಗ್ರಹಾಗಾರಗಳ ಶೇಖರಣೆ ಪ್ರಮಾಣಕ್ಕೂ ಪೂರೈಕೆಯಾಗುವ ನೀರಿಗೂ ತಾಳೆ ಆಗದಿರುವುದು ಇಂದು–ನಿನ್ನೆಯ ವಿದ್ಯಮಾನ ಅಲ್ಲ. ಪೂರೈಕೆಯಾಗುವ ಶೇ 48ರಷ್ಟು ಪ್ರಮಾಣದ ನೀರಿಗೆ ಲೆಕ್ಕವೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಆ ನೀರಿಗೂ ಶುಲ್ಕ ವಿಧಿಸುವಂತಾಗಿದ್ದರೆ ಈಗ ದರ ಏರಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಳೆಯದಾದ ಕೊಳವೆಗಳಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಲಯಗಳಲ್ಲಿ ನಲ್ಲಿ ಸಂಪರ್ಕ ಪಡೆದವರು ಮೀಟರ್ ಅಳವಡಿಕೆಗೆ ಆಸ್ಪದ ನೀಡದೆ ಬಿಟ್ಟಿಯಾಗಿ ನೀರು ಪಡೆಯುತ್ತಿದ್ದಾರೆ. ಅಂತಹ ಜನರಿಗೆ ರಾಜಕಾರಣಿಗಳೂ ಬೆಂಬಲವಾಗಿ ನಿಂತಿದ್ದಾರೆ.
ಸಾಲ ಕೊಟ್ಟ ಅಂತರರಾಷ್ಟ್ರೀಯ ಬ್ಯಾಂಕ್ಗಳ ತಾಳಕ್ಕೆ ತಕ್ಕಂತೆ ಕುಣಿದು ದರ ಹೆಚ್ಚಿಸಲು ತೋರುವ ಉತ್ಸಾಹವನ್ನು ಜಲಮಂಡಳಿ ಇಂತಹ ಮಾಫಿಯಾವನ್ನು ಮಟ್ಟ ಹಾಕುವಲ್ಲಿ ತೋರಬೇಕು. ಶುಲ್ಕ ಹೆಚ್ಚಳದ ಮೇಲಿರುವ ಆತುರ ಶುದ್ಧ ನೀರಿನ ಪೂರೈಕೆಯಲ್ಲೂ ಇರಬೇಕು.
ಜನರೂ ಅಷ್ಟೇ. ನೀರಿನಂತಹ ಅಮೂಲ್ಯ ನೈಸರ್ಗಿಕ ಸಂಪನ್ಮೂಲವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾ ಹೋದರೆ ಅದರಿಂದ ತಮಗೇ ಅಪಾಯ ಎಂಬುದನ್ನು ಅರಿಯಬೇಕು. ಮಿತವ್ಯಯದ ಮೂಲಕ ಜಲಮಂಡಳಿ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು. ಜಲಾಶಯಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಮಳೆ ನೀರಿನ ಸಂಗ್ರಹದತ್ತ ತುರ್ತಾಗಿ ಗಮನಹರಿಸಬೇಕು. ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಿ ವರ್ಷಗಳೇ ಉರುಳಿದ್ದರೂ ಶುದ್ಧ ನೀರು ಪಡೆಯುವ ಈ ಸುಲಭ ವಿಧಾನದ ಕಡೆಗೆ ಜನ ಒಲವು ತೋರದಿರುವುದು ವಿಷಾದದ ಸಂಗತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.