ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾದಂತೆ ನಿವೇಶನ, ಬಡಾವಣೆಗಳ ಸಂಖ್ಯೆ ದ್ವಿಗುಣಗೊಳ್ಳತೊಡಗಿತು. ಹಿಡಿಯಷ್ಟಿರುವ ನಿವೇಶನ ಕೊಳ್ಳಲಿಕ್ಕೆ ಲಕ್ಷ–ಕೋಟಿಗಳಲ್ಲೇ ಗುಣಿಸಬೇಕಾದ ಪ್ರಮೇಯ ಬಂದಿದೆ.
ರಸ್ತೆಯ ಬದಿಯ ಕೃಷಿಭೂಮಿಗಂತೂ ಭಾರೀ ಬೇಡಿಕೆ. ಇಕ್ಕಟ್ಟಾಗಿ ಒಕ್ಕಟ್ಟಾಗಿ ಇದ್ದ ಊರುಗಳೆಲ್ಲ ಈಗ ಹತ್ತು ಹನ್ನೆರಡು ಕಿಲೋಮೀಟರ್ಗಳವರೆಗೆ ಬಡಾವಣೆಗಳು ಮತ್ತು ಅಪಾರ್ಟ್ಮೆಂಟ್ಗಳ ಕಾಡುಗಳಾಗಿವೆ. ಹಳೆಯ ಸಂಸ್ಕೃತಿಯನ್ನು ಬಿಸುಟು ನಗರೀಕರಣದತ್ತ ಸಾಗುತ್ತಿರುವ ಈ ಧಾವಂತ ಆತಂಕಕಾರಿ.
ಕೃಷಿಯ ಏಳು–ಬೀಳುಗಳನ್ನು ಸಹಿಸಿಕೊಳ್ಳಲಾಗದ ಕೆಲವರು ಅನ್ನದಾತೆಯನ್ನು ಮಾರಿ ಸಖತ್ತು ದುಡ್ಡನ್ನು ಎಣಿಸುತ್ತಿದ್ದಾರೆ. ಹಿಂದೆ ಬಸ್ಸು, ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದ ಹೊಲ, ತೋಟ ತುಡಿಕೆಗಳು ಇಂದು ಕಾಂಕ್ರೀಟ್ ಕಾಡುಗಳಾಗಿವೆ. ಏರುತ್ತಿರುವ ತರಕಾರಿ, ಕಾಳು–ಧಾನ್ಯ ದರಗಳು, ಸಾಲದ ಸಂಬಳ, ಆಸ್ಪತ್ರೆ ತುಂಬ ರೋಗಿಗಳ
ನರಳಾಟ. ಇದು ನಮ್ಮ ಪರಿಸ್ಥಿತಿ. ಇದ್ದ ಹೊಲ–ಗದ್ದೆ ಕಾಯ್ದುಕೊಂಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿತ್ತೆ?