ಉಡುಪಿ: ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಮತ್ತು ಭಾವಚಿತ್ರವನ್ನು ಎಲ್ಲರೂ ಬಳಸುತ್ತಾರೆ. ಆದರೆ ಅವರು ತೋರಿಸಿದ ಮಾರ್ಗದಲ್ಲಿ ಮಾತ್ರ ಹೋಗದಿರುವ ಕಾರಣ ಸಂವಿಧಾನವನ್ನು ಅವರ ಆಶಯದಂತೆ ಜಾರಿಗೊಳಿಸಲು ಸಾಧ್ಯವಾಗಿಲ್ಲ’ ಎಂದು ಲೇಖಕಿ ಆತ್ರಾಡಿ ಅಮೃತ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಸೋಮವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಹಬ್ಬ 2014’ ಕಾರ್ಯಕ್ರಮದಲ್ಲಿ ಕೆ. ಫಣಿರಾಜ್ ಅವರು ಸಂಪಾದಿಸಿ ಅನುವಾದಿಸಿರುವ ‘ಜಾತಿ ಹಿಂಸೆಯ ರೀತಿ: ಬಾಬಾ ಸಾಹೇಬ್ ಅಂಬೇಡ್ಕರರ ಅನುಭವಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ದಲಿತರಿಗೆ ಮಾತ್ರ ಸೀಮಿತ ಮಾಡುವುದು ಸಣ್ಣತನವನ್ನು ತೋರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಜೈಭೀಮ್ ಛಲೋ ಜಾಥಾ ಏರ್ಪಡಿಸಲಾಗಿತ್ತು. ನಗರಸಭೆ ಅಧ್ಯಕ್ಷ ಪಿ. ಯುವರಾಜ ಜಾಥಾಕ್ಕೆ ಚಾಲನೆ ನೀಡಿದರು.
ಕನ್ನರ್ಪಾಡಿ, ಕಪ್ಪೆಟ್ಟು, ಮೂಡಬೆಟ್ಟು, ಮಲ್ಪೆ, ತೊಟ್ಟಂ, ಕದಿಕೆ, ಗುಜ್ಜರಬೆಟ್ಟು, ಪಡುಕುದ್ರು, ನೇಜಾರು, ಕಲ್ಯಾಣಪುರ, ಸಂತೆಕಟ್ಟೆ, ಸುಬ್ರಹ್ಮಣ್ಯನಗರ, ಪುತ್ತೂರು ಮುಂತಾದೆಡೆ ಜಾಥಾ ಸಾಗಿತು. ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ಉಡುಪಿ ಘಟಕದ ಅಧ್ಯಕ್ಷ ಜಿ. ರಾಜಶೇಖರ್, ಮುಖಂಡರಾದ ಜಯನ್ ಮಲ್ಪೆ, ಸುಂದರ್ಕಪ್ಪೆಟ್ಟು, ಕೆ. ಫಣಿರಾಜ್, ಸುಂದರಿ ಪುತ್ತೂರು, ದಿನಕರ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.