ಕಡೂರು: ‘ಅಂಬೇಡ್ಕರ್ ಎಂಬುದೇ ಒಂದು ಸಾಕ್ಷಿಪ್ರಜ್ಞೆ. ಕಂದಾಚಾರಗಳನ್ನು ವಿರೋಧಿಸಿ ಜಾಗೃತಿ ಮೂಡಿಸಲು ಜೀವನ ಮುಡಿಪಿಟ್ಟ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್’ ಎಂದು ಶಾಸಕ ವೈ.ಎಸ್.ವಿ ದತ್ತ ಅಭಿಪ್ರಾಯಪಟ್ಟರು.
ಕಡೂರು ಪಟ್ಟಣದ ಮರವಂಜಿ ವೃತ್ತದ ಮೆಸ್ಕಾಂ ಕಚೇರಿ ಹಿಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
‘ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಕಡೂರಿನಲ್ಲಿ ಗಣರಾಜ್ಯದಿನದಂದೇ ಭೂಮಿಪೂಜೆ ನೆರವೇರಿಸಿರುವುದು ಸಂತಸ ತಂದಿದೆ. ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ದೇಶದ ಸಾಕ್ಷಿಪ್ರಜ್ಞೆ. ಅಂಬೇಡ್ಕರ್ ವಿಚಾರಧಾರೆಯನ್ನು ಪ್ರತಿಯೊಬ್ಬರೂ ಅರಿಯಬೇಕು. ಅಂಬೇಡ್ಕರ್ ಪ್ರಜ್ಞೆ ಸಾರ್ವತ್ರಿಕವಾಗಿ ಮೂಡಬೇಕು. ಅವರ ವಿಚಾರಧಾರೆಯನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಆ ಮಹಾನ್ ಚೇತನಕ್ಕೆ ಸಲ್ಲಿಸುವ ಗೌರವ’ ಎಂದು ಹೇಳಿದರು.
ದಲಿತ ಸಂಘಟನೆಗಳು ಮತ್ತು ಇತರ ಎಲ್ಲ ಸಮಾಜದವರು ಸೇರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕಾಮಗಾರಿಗೆ ಬೇಕಾಗುವ ಎಲ್ಲ ಸಹಕಾರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಆರ್.ಶಿವಕುಮಾರ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಕೆಂಪರಾಜು, ಮಹೇಶ್ ಒಡೆಯರ್, ಎಂ.ಎಚ್.ಚಂದ್ರಪ್ಪ, ಚಂದ್ರಮೌಳಿ, ಕೆ.ಜಿ. ಶ್ರೀನಿವಾಸಮೂರ್ತಿ, ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಅಂಬೇಡ್ಕರ್ ನಗರ ಶಂಕರ್, ಬಿ.ಟಿ.ಗಂಗಾಧರ್ ನಾಯ್ಕ, ಶೂದ್ರ ಶ್ರೀನಿವಾಸ್, ಕೆ.ಟಿ.ಜಗದೀಶ್, ಕೆ.ಜಿ. ಶ್ರೀನಿವಾಸ್, ಕಡೂರು ಪುರಸಭೆಯ ಅಧ್ಯಕ್ಷೆ ಹಾಜಿರಾಬಿ ಖಾದರ್ ಹಾಗೂ ಸದಸ್ಯರು, ವಿವಿಧ ದಲಿತ ಸಂಘಟನೆಗಳ ಸದಸ್ಯರು ಮತ್ತು ಸರ್ವಸಮಾಜದ ಮುಖಂಡರು ಇದ್ದರು.