ಶ್ರೀನಗರ (ಪಿಟಿಐ): ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ, ಜಮ್ಮು ಮತ್ತು ಕಾಶ್ಮೀರ ವನ್ನು ತನ್ನ ಮುಂದಿನ ಗುರಿಯನ್ನಾಗಿಸಿಕೊಂಡಿದೆ ಎಂಬ ಬೇಹುಗಾರಿಕಾ ಸೂಚನೆಗಳನ್ನು ಗಂಭೀರವಾಗಿ ಪರಿಗಣಿ ಸಿರುವ ಸೇನೆ, ‘ಎಂತಹ ಸವಾಲನ್ನಾದರೂ ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಕಣಿವೆ ರಾಜ್ಯದಲ್ಲಿ ಅಲ್ಖೈದಾ ತನ್ನ ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಎಂಥ ಪ್ರಯತ್ನಗಳನ್ನಾದರೂ ಸಮರ್ಥ ವಾಗಿ ಎದುರಿಸಲು ಸಿದ್ಧ ಎಂದು ಹೇಳಿದರು.
ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಯುದ್ಧ ಸಾರಿರುವ ಅಲ್ ಖೈದಾ, ‘ಜಿಹಾದ್’ಗೆ ಸೇರುವಂತೆ ಕರೆ ನೀಡಿರುವ ವಿಡಿಯೊ ಬಿಡುಗಡೆ ಮಾಡಿದೆ.
‘ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ಒಳ ನುಸುಳದಂತೆ ಯೋಧರು ಕಾವಲು ಕಾಯುತ್ತಿದ್ದಾರೆ. ನಮ್ಮ ಬೇಹುಗಾರಿಕಾ ಜಾಲವೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅಲ್ಖೈದಾ ಸೇರಿ ದಂತೆ ಯಾವುದೇ ರೀತಿಯ ಭಯೋತ್ಪಾದಕ ಸಂಘಟನೆಗಳ ಬಗ್ಗೆಯೂ ಆತಂಕ ಪಡಬೇಕಾಗಿಲ್ಲ’ ಎಂದು ಸಿಂಗ್ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.