ಬೆಂಗಳೂರು: ‘ಆರ್ಟ್ ಆಫ್ ಲಿವಿಂಗ್’ ಆಶ್ರಮದವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಗರ ಗ್ರಾಮದಲ್ಲಿ ನಮ್ಮ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಜಮೀನನ್ನು ಹಿಂತಿರುಗಿಸಬೇಕು’ ಎಂದು ಜಮೀನಿನ ಮಾಲೀಕರಾದ ಆರತಿ ಕೃಷ್ಣ ಒತ್ತಾಯಿಸಿದರು.
ಈ ಬಗ್ಗೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅಕ್ರಮ ಒತ್ತುವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
‘ಹೈಕೋರ್ಟ್ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಅ.20 ಮತ್ತು 21 ರಂದು ಜಮೀನಿನ ಸರ್ವೆ ಸಡೆಸಿದ್ದಾರೆ. ಆಗ ಆಶ್ರಮದವರು 11 ಎಕರೆ ಜಮೀನಿನ ಪೈಕಿ 4.37 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟಿದೆ’ ಎಂದು ಅವರು ತಿಳಿಸಿದರು.
‘ಆರ್ಟ್ ಆಫ್ ಲಿವಿಂಗ್ ಆಶ್ರಮದವರು ಸರ್ವೆ ನಂ.71.2ಎ ನಲ್ಲಿ ಅಕ್ರಮವಾಗಿ ಹೆಲಿಪ್ಯಾಡ್, 300 ಹವಾನಿಯಂತ್ರಿತ ಕೊಠಡಿ ಹಾಗೂ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಆರೋಪಿಸಿದರು. ‘ಶ್ರೀ ಶ್ರೀ ರವಿಶಂಕರ ಸ್ವಾಮೀಜಿ ಅವರು ನಿರ್ಮಿಸಿದ್ದ ಮೀನಾಕ್ಷಿ ಧ್ಯಾನ ಮಂದಿರಕ್ಕೆ ಭಕ್ತರ ಓಡಾಟಕ್ಕೆ ದಾರಿ ಮಾಡಲು ಮೂರು ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ಅವರು ಇಡೀ ಜಮೀನನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.
‘ಈ ಕುರಿತು 2005 ಹಾಗೂ 2006 ರಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ನಾವು ಅಮೆರಿಕದಲ್ಲಿದ್ದ ಕಾರಣ ಅವುಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಈ ಅವಕಾಶವನ್ನು ಪಡೆದು ರವಿಶಂಕರ್ ಅವರು ನಮ್ಮ ಜಮೀನನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದರು.
ತಹಶೀಲ್ದಾರ್ಗೆ ಮನವಿ: ‘ಆಶ್ರಮದವರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಿ, ಜಮೀನನ್ನು ನಮಗೆ ವಾಪಸ್ ಕೊಡಿಸಬೇಕು. ಆಶ್ರಮದ ಸಿಬ್ಬಂದಿಯಿಂದ ನನಗೆ ಬೆದರಿಕೆ ಇದೆ. ನನಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು’ ಎಂದು ಆರತಿ ಕೃಷ್ಣ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಅವರಿಗೆ ಗುರುವಾರ ಸಂಜೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.