ಬೆಂಗಳೂರು: ‘ಯೋಜನಾ ಆಯೋಗಕ್ಕೆ ಬದಲಾಗಿ ರಾಷ್ಟ್ರೀಯ ಅಭಿವೃದ್ಧಿ ಸುಧಾರಣಾ ಆಯೋಗವನ್ನು (ಎನ್ಡಿಆರ್ಸಿ) ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.
ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ರಾಜ್ಯ ಶಾಖೆಯ ವತಿಯಿಂದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಚೀನಾದಲ್ಲಿ ಎನ್ಡಿಆರ್ಸಿ ಇದೆ. ಭಾರತ ಒಂದು ಗಣರಾಜ್ಯ. ಇಲ್ಲಿ ಎನ್ಡಿಆರ್ಸಿಯನ್ನು ಸ್ಥಾಪಿಸಿದರೆ ದೇಶದ ಆರ್ಥಿಕ ಅಭಿವೃದ್ಧಿಗೆ ತೊಡಕುಂಟಾಗುತ್ತದೆ. ಅದರ ಬದಲಿಗೆ ಯೋಜನಾ ಆಯೋಗವನ್ನು ಪುನರ್ರಚಿಸಿ ಇನ್ನಷ್ಟು ಬಲಪಡಿಸಬೇಕು. ಅಲ್ಲದೆ, ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು’ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಲವು ಬಗೆಯ ಸಂಘರ್ಷಗಳು ಏರ್ಪಡುತ್ತವೆ. ಜಾತಿ, ಧರ್ಮ, ಜನಸಂಖ್ಯೆ ಮತ್ತು ಆರ್ಥಿಕ ಪರಿಸ್ಥಿತಿಗಳು ಇದಕ್ಕೆ ಕಾರಣ. ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರ ಇದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ.ಡಿ.ಜೀವನ್ಕುಮಾರ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಸಂಬಂಧ ಏರ್ಪಡದಿದ್ದರೆ ದೇಶದ ಅಭಿವೃದ್ಧಿಯೂ ಸಾಧ್ಯವಿಲ್ಲ. ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು’ ಎಂದರು.
ಕೇಂದ್ರದಲ್ಲಿ ಪ್ರತಿ ಬಾರಿ ಹೊಸ ಸರ್ಕಾರ ಬಂದಾಗಲೂ ರಾಜ್ಯಪಾಲರನ್ನು ಬದಲಾಯಿಸಲಾಗುತ್ತದೆ. ಇದರಿಂದ ರಾಜ್ಯ ಮತ್ತು ಕೇಂದ್ರದ ಮಧ್ಯೆ ಸಾಮರಸ್ಯದ ಕೊರತೆ ಉಂಟಾಗುತ್ತದೆ. ಇದನ್ನು ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.