ಚೆನ್ನೈ (ಪಿಟಿಐ): ಜಯಂತಿ ನಟರಾಜನ್ ಅವರ ಜತೆಗೆ ಇನ್ನೂ ಕೆಲವರು ಪಕ್ಷ ತೊರದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಇ.ವಿ.ಕೆ.ಎಸ್. ಇಳಂಗೋವನ್ ಅವರು ತಿರುಗೇಟು ನೀಡಿದ್ದಾರೆ.
‘ನೀವು ರಾಜೀನಾಮೆ ನೀಡಿದ್ದು ಒಳ್ಳೆಯದೇ ಆಯಿತು. ನಿಮ್ಮ ನಿರ್ಧಾರಕ್ಕೆ ಪಕ್ಷದ ಕಾರ್ಯಕರ್ತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ನಿರ್ಗಮನದಿಂದ ಪಕ್ಷ ಮುಂದೆ ಉತ್ತಮ ದಿನಗಳನ್ನು ಕಾಣಬಹುದು’ ಎಂದಿದ್ದಾರೆ.
‘ಗಂಗಾ ನದಿ ಸ್ವಚ್ಛಗೊಳ್ಳುತ್ತದೆಯೋ ಏನೋ ಗೊತ್ತಿಲ್ಲ. ಆದರೆ, ನೀವು ಹೊರಹೋಗಿದ್ದರಿಂದ ಕಾಂಗ್ರೆಸ್ ಸ್ವಚ್ಛಗೊಳ್ಳುತ್ತದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘1984ರಲ್ಲಿ ಅವರು ಪಕ್ಷ ಸೇರಿದ್ದೊಂದು ರಾಜಕೀಯ ದುರಂತ. ಅಂದಿನಿಂದ ಇಲ್ಲಿಯವರೆಗೆ ಅವರು ಪಕ್ಷಕ್ಕಾಗಿ ಯಾವ ಸೇವೆಯನ್ನೂ ಮಾಡಿಲ್ಲ. ಅವರು ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿರುವುದು ಮೋದಿ ಅವರ ‘ಸಲಹೆ’ಯ ಮೇರೆಗೋ ಅಥವಾ ‘ಭಯ’ದಿಂದಲೋ ಎಂಬುದನ್ನು ಬಹಿರಂಗಪಡಿಸಬೇಕು’ ಎಂದಿದ್ದಾರೆ.
‘ತಮಿಳುನಾಡು ಕಾಂಗ್ರೆಸ್ನಿಂದ ಇನ್ನಷ್ಟು ಮಂದಿ ಹೊರಹೋಗಬೇಕಾಗಿದೆ. ಅದರಿಂದ ಪಕ್ಷಕ್ಕೆ ಒಳಿತಾಗುತ್ತದೆ’ ಎಂದು ಪಿ.ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರ ಹೆಸರು ಉಲ್ಲೇಖಿಸದೆ ಇಳಂಗೋವನ್ ಕಿಡಿಕಾರಿದ್ದಾರೆ.