ಉಡುಪಿ: ‘ಭಾರತೀಯ ಜೀವನ ಪದ್ಧತಿಯ ಭಾಗವಾದ ಮಿತ ಆಹಾರ, ನಿಯಮಿತ ವ್ಯಾಯಾಮದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ’ ಎಂದು ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎಂ. ಹೆಗ್ಡೆ ಅಭಿಪ್ರಾಯಪಟ್ಟರು.
ಉಡುಪಿ ಪೂರ್ಣಪ್ರಜ್ಞ ಕಾಲೇಜು (ಪಿಪಿಸಿ), ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕಾಲೇಜು ದೈಹಿಕ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಧಾನ ಸಭಾಂಗಣ ನಡೆಯುತ್ತಿರುವ ‘ಆರೋಗ್ಯಕ್ಕೆ ಸಂಬಂಧಿಸಿದ ದೈಹಿಕ ದಾರ್ಢ್ಯ ಮತ್ತು ಕ್ಷೇಮ’ ವಿಷಯ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಪಾಶ್ಚಾತ್ಯರೂ ಈಗ ಭಾರತೀಯ ಜೀವನ ಕ್ರಮ ಮತ್ತು ವಿಜ್ಞಾನ ಪದ್ಧತಿಗೆ ಮಾರು ಹೋಗುತ್ತಿದ್ದಾರೆ. ಹಸಿದಾಗಷ್ಟೇ ತಿನ್ನುವ, ಬಾಯಾರಿದಾಗ ಕುಡಿಯುವ ಮತ್ತು ಅನ್ನ– ಆಹಾರಗಳನ್ನು ಅರಗಿಸಲು ಶ್ರಮವಹಿಸಿ ದುಡಿಯುವ ಪದ್ಧತಿಯನ್ನು ಭಾರತ ಜಗತ್ತಿಗೆ ಸಾರಿದೆ. ಅಲ್ಲದೆ ಪರಸ್ಪರ ಪ್ರೀತಿ, ಪರೋಪಕಾರ, ಕೃತಜ್ಞತೆ ಮತ್ತು ಮತ್ಸರವಿಲ್ಲದ ಜೀವನ ಪದ್ಧತಿಯಿಂದ ಜೀವತಾವಧಿ ವೃದ್ಧಿ ಸಾಧ್ಯ ಎಂದು ಹೇಳಿದರು.
ಬೆಳ್ಳಿಪಾತ್ರೆ ನೀರು ಎಬೊಲಾದಂತಹ ರೋಗ ತಡೆಯಬಲ್ಲದು: ಬೆಳ್ಳಿ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಸೇವಿಸುವುದರಿಂದ ವೈರಸ್ನಿಂದ ಬರುವ ಎಬೊಲಾದಂತಹ ಕಾಯಿಲೆಗಳನ್ನು ತಡೆಯಬಹುದು. ಬೆಳ್ಳಿ ಪಾತ್ರೆಯು ಅನಪೇಕ್ಷಿತ ವೈರಸ್ಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಬೆಳ್ಳಿ ಪಾತ್ರೆಯಲ್ಲಿ ನೀರು ಸಂಗ್ರಹಿಸುವ ಕ್ರಮ ಜಾರಿಯಲ್ಲಿದೆ ಎಂದರು.
‘ಶಿಕ್ಷಣದಲ್ಲಿ ಪಾಠಕ್ಕೆ ನೀಡುವಷ್ಟೇ ಮಹತ್ವವನ್ನು ಆಟಕ್ಕೂ ನೀಡುವ ಅಗತ್ಯವಿದೆ’ ಎಂದು ಆಶೀರ್ವಚನ ನೀಡಿದ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಪಿಪಿಸಿ ಪ್ರಾಂಶುಪಾಲ ಕೆ. ಸದಾಶಿವರಾವ್ ಅಧ್ಯಕ್ಷತೆ ವಹಿಸಿದ್ದರು. ಅದಮಾರು ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಇಥಿಯೋಪಿಯಾ ಮೆಕೆಲ್ಲೆ ವಿಶ್ವವಿದ್ಯಾಲಯದ ಕ್ರೀಡಾ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಎಸ್. ಹಸ್ರಾನಿ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು.
ಪಿಪಿಸಿಯ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ಮತ್ತು ಮಾರ್ಕೆಟಿಂಗ್ ವಿಭಾಗದ ಡೀನ್ ಪ್ರೊ. ಕೆ. ಸತ್ಯನಾರಾಯಣನ್ ವಂದಿಸಿದರು. ಹರಿಣಾಕ್ಷಿ ಶೆಟ್ಟಿ ಮತ್ತು ಪೂರ್ಣಿಮಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.