ಯಲಹಂಕ: ‘ಆಧುನಿಕ ತಂತ್ರಜ್ಞಾನದ ವಿವಿಧ ಮೂಲಗಳಿಂದ ಮನುಷ್ಯ ಹೆಚ್ಚಿನ ಸಂಪಾದನೆಯ ಜೊತೆಗೆ ತನಗೆ ಅಗತ್ಯವಿರುವ ಎಲ್ಲ ಸೌಲಭ್ಯ ಗಳನ್ನು ಪಡೆಯುತ್ತಿದ್ದರೂ ಉತ್ತಮ ಜೀವನವನ್ನು ನಡೆಸಲು ಬೇಕಾದ ಅಂತರಂಗ ಶಿಕ್ಷಣ ದೊರಕುತ್ತಿಲ್ಲ ಎಂದು ಕರ್ನಾಟಕ ಲೋಕಾಯುಕ್ತದ (ಜಾಗೃತದಳ) ಮಾಜಿ ನಿರ್ದೇಶಕ ಡಿ. ಎನ್.ಮುನಿ ಕೃಷ್ಣ ವಿಷಾದಿಸಿದರು.
ಅಮೃತಹಳ್ಳಿ ಗೋವಿಂದಪ್ಪ ಬಡಾವಣೆಯ ಶ್ರೀರಾಮ ದೇವಾಲಯದಲ್ಲಿ ಆರನೇ ವರ್ಷದ ಶ್ರೀರಾಮನವಮಿ ಮಹೋತ್ಸವದ ಅಂಗವಾಗಿ ಸಂಗೀತ, ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿ ದ್ವಾಂಸರಿಗಾಗಿ ಆಯೋಜಿಸಿದ್ದ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಮುಖಾಂತರ ಅಂತರಂಗ ಶಿಕ್ಷಣ ದೊರಕಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಕ್ಷೇತ್ರಗಳ ಬೆಳ ವಣಿಗೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.
ವಿದುಷಿ ಕಮಲಾ ವೈದ್ಯ ನಾಥನ್, ವಿದ್ವಾನ್ಗಳಾದ ಎ.ಆರ್.ಕೃಷ್ಣಮೂರ್ತಿ, ಸಿ.ಚಲುವರಾಜ್, ರಾಜಾರಾವ್, ಜಯರಾಮರಾವ್, ಕವಿ ಬಿ.ಆರ್.ಲಕ್ಷ್ಮಣರಾವ್ ಅವರನ್ನು ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಚಿಂತಲಪಲ್ಲಿ ಡಾ.ಕೆ.ರಮೇಶ್, ಮೃದಂಗ ವಿದ್ವಾನ್ ಟಿ.ಎಸ್.ಚಂದ್ರಶೇಖರ್, ಗಮಕ ವಿದ್ವಾನ್ ಜಯರಾಮರಾವ್, ಅಮ್ಮ ಫೌಂಡೇಶನ್ ಹೆಲ್ಪ್ ಅಂಡ್ ಗ್ರೋ ಸಂಸ್ಥೆಯ ಅಧ್ಯಕ್ಷ ವಿ.ಕೆ.ರೋಹಿತ್ ಉಪಸ್ಥಿತಸಿದ್ದರು.