ಉಡುಪಿ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮೇಳ ಉತ್ತಮ ವೇದಿಕೆ ಯಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಶನಿವಾರ ನಡೆದ ಒಂದು ದಿನದ ‘ಎಂಐಟಿಕೆ ಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಅಧ್ಯಕ್ಷ ಸಿದ್ದಾರ್ಥ ಜೆ ಶೆಟ್ಟಿ, ಪ್ರಾಂಶುಪಾಲ ಪ್ರೊ. ಸತೀಶ್ ಅಂಸಾಡಿ ಇದ್ದರು. ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಪ್ರೊ. ಶಶಿಕಲಾ ನಿರೂಪಿಸಿ ವಂದಿಸಿದರು.
ಆಕ್ಸೆಂಚರ್, ಇನ್ಫೊಸಿಸ್, ಎಂಫಸಿಸ್, ಹಿಂದೂಜಾ ಗ್ಲೋಬಲ್ ಸಲೂಷನ್, ವಿಪ್ರೊ ಮುಂತಾದ 30ಕ್ಕೂ ಅಧಿಕ ಹೆಸರಾಂತ ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದವು.
ವಿಜ್ಞಾನ, ಕಲೆ, ವಾಣಿಜ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ, ಡಿಪ್ಲೋಮಾ, ಐಟಿಐ ಶಿಕ್ಷಣ ಹೊಂದಿದ 2 ಸಾವಿರಕ್ಕೂ ಅಭ್ಯರ್ಥಿಗಳು ಮೇಳಕ್ಕೆ ಬಂದಿದ್ದರು. 600ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಕ್ಕೆ ಆಯ್ಕೆಯಾದರು.