ಬೆಂಗಳೂರು: ‘ಸಂಗೀತವು ಜಾತಿ, ಧರ್ಮ, ಮೂಢನಂಬಿಕೆಗಳಿಂದ ನಮ್ಮನ್ನು ಮುಕ್ತ ಮಾಡಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮೂಡಿಸುತ್ತದೆ’ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಸಂಗೀತಗಂಗಾ ಸಂಸ್ಥೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಜಿ.ವಿ.ಅತ್ರಿ ಸವಿನೆನಪು ಸಂಗೀತೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಗೀತ, ಸಾಹಿತ್ಯ, ಕಲೆಗಳಿಗೆ ಯಾವುದೇ ಜಾತಿ, ಧರ್ಮ ಇಲ್ಲ. ಕಲಾವಿದರು ಮಾತ್ರ ನಿಜವಾದ ಜಾತ್ಯತೀತರು’ ಎಂದು ಹೇಳಿದರು.
‘ಸಂಗೀತಕ್ಕೆ ಮನಸ್ಸನ್ನು ಬದಲಾಯಿಸುವ ಶಕ್ತಿ ಇದೆ. ಆದರೆ, ಸಂಗೀತವನ್ನು ಒಂದು ಪಠ್ಯವಾಗಿ ಅಳವಡಿಸುವುದರಿಂದ ವಿದ್ಯಾರ್ಥಿಗಳು ಸಂಗೀತವನ್ನು ದ್ವೇಷಿಸುವ ಸಾಧ್ಯತೆ ಇದೆ. ಪಠ್ಯವಾಗಿಸದೇ ಸಂಗೀತವನ್ನು ಮಕ್ಕಳಿಗೆ ಹೇಳಿಕೊಡಬೇಕು’ ಎಂದರು.
‘ಮಕ್ಕಳನ್ನು ಎದೆ ತುಂಬಿ ಹಾಡುವೆನು, ಸರಿಗಮಪದಂತಹ ಕಾರ್ಯಕ್ರಮಗಳಲ್ಲಿ ಹಾಡುವಂತೆ ಮಾಡುವುದು ಸಂಗೀತದ ಉದ್ದೇಶವಲ್ಲ. ಮಕ್ಕಳಲ್ಲಿ ಸಂಗೀತದ ಕುರಿತು ಸಾತ್ವಿಕ ಗುಣಗಳನ್ನು ಬೆಳಸಿ’ ಎಂದು ಹೇಳಿದರು.
ಪರಿಸರವಾದಿ ಸುರೇಶ್ ಹೆಬ್ಳೀಕರ್ ಮಾತನಾಡಿ, ‘ಸಂಗೀತಕ್ಕೆ ಅದ್ಭುತ ಶಕ್ತಿ ಇದೆ. ಇದರಲ್ಲಿ ತಲ್ಲೀನತೆ ಇದ್ದರೆ ಎಲ್ಲಾ ರೀತಿಯ ಸಾಧನೆಗಳನ್ನು ಮಾಡಬಹುದು. ದೇವರ ಪದ, ದಾಸರ ಪದಗಳು ಸುಗಮ ಸಂಗೀತದ ಮೂಲಕ ಪ್ರಖ್ಯಾತವಾಗಿವೆ. ಜಿ.ವಿ.ಅತ್ತಿ ಅವರು ಸುಗಮ ಸಂಗೀತದ ಮೂಲಕ ಪ್ರಖ್ಯಾತರಾದವರು’ ಎಂದು ಅವರು ಹೇಳಿದರು.