ನವದೆಹಲಿ (ಪಿಟಿಐ): ಮುಂಬೈ ಕರಾವಳಿಯ ತೈಲ ನಿಕ್ಷೇಪವನ್ನು ಎಸ್ಸಾರ್ ಕಂಪೆನಿಗೆ ನೀಡುವ ಕೇಂದ್ರದ ನಿರ್ಧಾರ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದು ಇದನ್ನು ತಡೆಯಲು ಕೋರಿ ಆಮ್ ಆದ್ಮಿ ಪಾರ್ಟಿ (ಎಎಪಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
‘21 ವರ್ಷಗಳ ಹಿಂದೆ ಹರಾಜಿಗೆ ಇಡಲಾಗಿದ್ದ ಈ ತೈಲ ನಿಕ್ಷೇಪವನ್ನು ಈಗ ಚುನಾವಣೆ ಸಮಯದಲ್ಲಿ ಅದರಲ್ಲೂ ನೀತಿಸಂಹಿತೆ ಜಾರಿಯಲ್ಲಿರುವಾಗ ಎಸ್ಸಾರ್ ಗ್ರೂಪ್ಗೆ ನೀಡುವುದು ಸರಿ ಅಲ್ಲ’ ಎಂದು ಪಕ್ಷದ ಮುಖಂಡ ಪ್ರಶಾಂತ ಭೂಷಣ್ ದೂರು ನೀಡಿದ್ದಾರೆ.
ಇದೊಂದು ಪ್ರಮುಖ ನಿರ್ಧಾರವಾಗಿರುವುದರಿಂದ ಇದಕ್ಕೆ ಆಯೋಗ ಅವಕಾಶ ನೀಡಬಾರದು, ಹಾಗೇನಾದರೂ ಆದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಭೂಷಣ್ ಪ್ರತಿಪಾದಿಸಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಣದಲ್ಲಿರುವ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಎಎಪಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿದ್ದಾರೆ.
ಆದರೆ ಪ್ರಚಾರ ವಿಷಯದಲ್ಲಿ ಎಎಪಿ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಇವುಗಳನ್ನು ತೆಗೆದುಹಾಕಬೇಕು ಎಂದು ಚುನಾವಣಾ ಆಯೋಗಕ್ಕೆ ಅವರು ಮನವಿ ಮಾಡಿಕೊಂಡಿದ್ದಾರೆ.