ನವದೆಹಲಿ (ಪಿಟಿಐ): ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಎಸ್ಐಎಸ್ ಇರಾಕ್ ಮತ್ತು ಸಿರಿಯಾದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಮಾದರಿಯಲ್ಲೇ ಭಾರತದಲ್ಲೂ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪ್ರಯತ್ನಿಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ತಿಳಿಸಿದೆ.
ತಲೆ ಮರೆಸಿಕೊಂಡಿರುವ ಐಎಂ ಭಯೋತ್ಪಾದಕ ಮೊಹಮದ್ ಶಫಿ ಅರ್ಮಾರ್ ನಡೆಸಿದ ಇ–ಮೇಲ್ ಸಂವಹನದಲ್ಲಿ ಸಿರಿಯಾಕ್ಕೆ ಇತರ ಜಿಹಾದಿಗಳ ಜತೆ ಹೋಗಲು ಬಯಸಿರುವುದಾಗಿ ತಿಳಿಸಿರುವ ವಿಷಯ ತನಿಖೆಯಿಂದ ಗೊತ್ತಾಗಿದೆ ಎಂದು ಎನ್ಐಎ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಐಎಸ್ಐಎಸ್ ಭಯೋತ್ಪಾದಕ ಸಂಘಟನೆಯ ಮಾದರಿಯನ್ನು ಭಾರತದಲ್ಲೂ ಅನುಸರಿಸಲು ಐಎಂ ಭಯೋತ್ಪಾದಕರು ಪ್ರಯತ್ನಿಸುತ್ತಿದ್ದಾರೆ ಎಂದು ಎನ್ಐಎ ಅಧಿಕಾರಿಗಳು 20 ಐಎಂ ಭಯೋತ್ಪಾದಕರ ವಿರುದ್ಧ ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. 20 ಭಯೋತ್ಪಾದಕರ ಪೈಕಿ 17 ಜನರು ತಲೆ ಮರೆಸಿಕೊಂಡಿದ್ದು ತೆಹಸಿನ್ ಅಖ್ತರ್, ಹೈದರ್ ಅಲಿ ಮತ್ತು ಜಿಯಾಉರ್ ರೆಹಮಾನ್ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ತಲೆ ಮರೆಸಿಕೊಂಡಿರುವ ಇನ್ನೊಬ್ಬ ಭಯೋತ್ಪಾದಕ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಸಹ ಇತರ ಜಿಹಾದಿಗಳ ಜತೆ ಸಿರಿಯಾಕ್ಕೆ ತೆರಳಲು ಬಯಸಿದ್ದ ಎಂಬ ಮಾಹಿತಿಯನ್ನು ದೋಷಾರೋಪ ಪಟ್ಟಿಯಲ್ಲಿ ಒದಗಿಸಲಾಗಿದೆ.