ನವದೆಹಲಿ(ಪಿಟಿಐ, ಐಎಎನ್ಎಸ್): ಮಾಜಿ ಯೋಧರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ(ಒಆರ್ಒಪಿ) ಅನುಷ್ಠಾನಕ್ಕೆ ಸರ್ಕಾರ ಶನಿವಾರ ಒಪ್ಪಿಗೆ ಸೂಚಿಸಿದೆ. ಆದರೆ, ಎಲ್ಲಾ ಬೇಡಿಕೆಗಳನ್ನು ಈಡೇರಿಸದಿರುವುದು ಸಂಪೂರ್ಣ ತೃಪ್ತಿ ತಂದಿಲ್ಲ ಎಂದು ನಿವೃತ್ತ ಯೋಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ 80 ದಿನಗಳಿಂದ ಧರಣಿ ನಡೆಸುತ್ತಿರುವ ನಿವೃತ್ತ ಯೋಧರು, ಸರ್ಕಾರ ಯೋಜನೆ ಅನುಷ್ಠಾನ ಪ್ರಕಟಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯೋಜನೆ ಅನುಷ್ಠಾನ ಕುರಿತು ಸರ್ಕಾರದ ಘೋಷಣೆಯನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ, ಇದು ನಮಗೆ ಸಂಪೂರ್ಣ ತೃಪ್ತಿ ತಂದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ಪ್ರತಿಕ್ರಿಯಿಸಿದರು.
ಘೋಷಣೆ ತೃಪ್ತಿ ತರದೇ ಇರುವುದರಿಂದ ಧರಣಿ ಮುಂದುವರೆಯಲಿದೆ. ಮುಂದಿನ ನಡೆ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.