ಬೆಂಗಳೂರು: ಸೂರ್ಯರಶ್ಮಿ ಭುವಿ ತಾಗುವ ಮುನ್ನ ಅಲ್ಲಿ ಮಕ್ಕಳ ಕಲವರ. ಹೆಲ್ಮೆಟ್ ತೊಟ್ಟ ಪುಟಾಣಿಗಳ ಓಡಾಟ. ಸ್ಕೈಟ್ ಬೋರ್ಡ್ ಮೇಲೆ ತೂಗಾಟ. ಇದೆಲ್ಲ ಕಂಡಿದ್ದು ಸದಾಶಿವ ನಗರದ ಸ್ಯಾಂಕಿ ಕೆರೆ ಮುಂಭಾಗದ ರಸ್ತೆಯಲ್ಲಿ.
ಭಾನುವಾರ ಆಯೋಜಿಸಿದ್ದ ‘ಸೈಕಲ್ ದಿನ’ ಕಾರ್ಯಕ್ರಮದಲ್ಲಿ ನಸುಕಿನ 6.45ರ ವೇಳೆಗೆ ನಾಗರಿಕರು ಹುಮ್ಮಸ್ಸಿನಿಂದ ಮಕ್ಕಳೊಟ್ಟಿಗೆ ಧಾವಿಸಿ ಪಾಲ್ಗೊಂಡರು. ಬೆಂಗಳೂರು ಸಾರ್ವಜನಿಕ ಸ್ಥಳಗಳ ಒಕ್ಕೂಟ (ಬಿಎಸ್ಒಎಸ್) ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಭಾಗಿತ್ವದಲ್ಲಿ ಸದಾಶಿವ ನಗರ ನಿವಾಸಿಗಳ ಕಲ್ಯಾಣ ಸಂಘ (ಆರ್ಡಬ್ಲ್ಯುಎ) ಹಮ್ಮಿಕೊಂಡಿದ್ದ ‘ಓಪನ್ ಸ್ಟ್ರೀಟ್’ (ವಾಹನ ಸಂಚಾರ ಮುಕ್ತ ರಸ್ತೆ) ಕಾರ್ಯಕ್ರಮದಲ್ಲಿ ಹೊತ್ತು ಏರಿದಂತೆಲ್ಲ ಜನರ ಸಂಭ್ರಮ ಇಮ್ಮಡಿಸಿತು.
ಖುಷಿಯಲ್ಲಿ ರಸ್ತೆಯಲ್ಲೇ ಹೆಜ್ಜೆ ಹಾಕಿದ ಸ್ಥಳೀಯರು ಕುಣಿದರು. ವಿವಿಧ ಬಗೆಯ ತಿಂಡಿ– ತಿನಿಸು ಸವಿದರು. ಮಕ್ಕಳು ಟಾಂಗಾ ಸವಾರಿ ಮಾಡಿ ಸಂಭ್ರಮಿಸಿದರು. ಸಂಗೀತ, ನೃತ್ಯ, ಚಿತ್ರಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ಜಾಗೃತಿ ಕಾರ್ಯಾಗಾರಗಳಿಗೂ ಕಾರ್ಯಕ್ರಮ ಸಾಕ್ಷಿಯಾಯಿತು.