ಬಳ್ಳಾರಿ: ಕಂದಾಚಾರ ಮತ್ತು ಮೌಢ್ಯವನ್ನು ಆಚರಿಸುವುದನ್ನು ಬಿಟ್ಟು ವಿವಿಧ ಧರ್ಮಗಳಲ್ಲಿರುವ ವಿಶಿಷ್ಟ ನಂಬಿಕೆಗಳ ಆಚರಣೆಯಲ್ಲಿ ತೊಡಗುವ ಮೂಲಕ ಭಗವಂತನನ್ನು ಸ್ಮರಿಸಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ವ್ಯಾಸದಾಸ ಮಂಟಪದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಮಂತ್ರಾಲಯದ ಶ್ರೀಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ 13ನೇ ಚಾರ್ತುಮಾಸ ವ್ರತ ದೀಕ್ಷಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನಾಂಗಕ್ಕೆ ಧರ್ಮ ಹಾಗೂ ವಿಜ್ಞಾನದ ರೂಪುರೇಷೆಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಯುವ ಪೀಳಿಗೆಯು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಚೈತನ್ಯ ತುಂಬಲು ಅಣಿಯಾಗುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಧರ್ಮ ಉಳಿವು ಹಾಗೂ ಅದರ ಬೆಳವಣಿಗೆ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಮನುಷ್ಯ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾಗವತದಲ್ಲಿ ಪರಿಹಾರೋಪಾಯ ಸೂಚಿಸಲಾಗಿದೆ. ಅಧ್ಯಾತ್ಮದ ಚಿಂತನೆಗಳಿಂದ ಮಾತ್ರ ಮಾನಸಿಕ ಒತ್ತಡಗಳಿಂದ ಹೊರಬರಲು ಸಾಧ್ಯ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶ್ರೀಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮನೆಯೇ ಮೊದಲ ಪಾಠ ಶಾಲೆ ಆಗಿರುವುದರಿಂದ ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ನೀಡಬೇಕು ಎಂದು ಅವರು ತಿಳಿಸಿದರು. ಜಯತೀರ್ಥಾಚಾರ್ಯ, ನಿಪ್ಪಾಣಿ ಗುರು ರಾಜಾಚಾರ್ಯ, ಸತ್ಯಾನಾರಾಯಣ ಆಚಾರ್ಯ, ಕರೂರಾಚಾರ್ಯ ಅವರು ದಶೋಪನಿಷತ್ ಕುರಿತು ಉಪನ್ಯಾಸ ನೀಡಿದರು.
ಲಕ್ಷ್ಮಣ, ರಾಮಮೂರ್ತಿ, ಸುಶೀಲೇಂದ್ರ, ಕೃಷ್ಣಮೂರ್ತಿ ಈ ಸಂದರ್ಭ ಹಾಜರಿದ್ದರು. ಪ್ರಭಂಜನದಾಸ್ ಸ್ವಾಗತಿಸಿದರು. ಮಧ್ವ ಸಂಘದ ಕಾರ್ಯದರ್ಶಿ ಎಸ್.ವಿಜಯಸಿಂಹ ನಿರೂಪಿಸಿದರು.