ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಿವಸೇನಾ ಬುಧವಾರ ಹೇಳಿದೆ. ಸ್ಥಾನಗಳ ಹಂಚಿಕೆ ಬಗ್ಗೆ ಮೈತ್ರಿಕೂಟದ ಪಕ್ಷಗಳೊಂದಿಗೆ ಮಂಗಳವಾರ ನಡೆದ ಸಭೆ ಅಪೂರ್ಣವಾಗಿದೆ.
‘150 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳಲ್ಲಿ ಶಿವಸೇನಾ ಕಣಕ್ಕಿಳಿಯಲು ಸಾಧ್ಯವಿಲ್ಲ. ಮಹಾಮೈತ್ರಿಯ ಇತರ ನಾಲ್ಕು ಪಕ್ಷಗಳನ್ನು ಒಟ್ಟಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಬಿಜೆಪಿ ಹೊರಬೇಕು ಎಂದು ಸೇನಾ ನಾಯಕ ರಾಮದಾಸ್ ಕದಂ ವರದಿಗಾರರಿಗೆ ತಿಳಿಸಿದ್ದಾರೆ.
ಸಣ್ಣ ಪಕ್ಷಗಳೊಂದಿಗಿನ ಬಿಕ್ಕಟ್ಟು ಶಮನ: ವಿಧಾನಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಬಿಟ್ಟು ಕೊಡುವ ಭರವಸೆಯನ್ನು ಉದ್ಧವ ಠಾಕ್ರೆ ನೀಡಿದ್ದರಿಂದ ಮಹಾಮೈತ್ರಿ (ಶಿವಸೇನಾ,ಬಿಜೆಪಿ, ಮತ್ತು ಇತರ ನಾಲ್ಕು ಸಣ್ಣ ಪಕ್ಷಗಳು) ತೊರೆಯುವ ನಿರ್ಧಾರದಿಂದ ಅದರ ನಾಲ್ಕು ಸಣ್ಣ ಪಕ್ಷಗಳು ಹಿಂದೆ ಸರಿದಿವೆ.
‘ಉದ್ಧವ ಠಾಕ್ರೆ ಅವರೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ. 150 ಸ್ಥಾನಗಳನ್ನು ನೀವಿಟ್ಟುಕೊಳ್ಳಿ, 120 ಬಿಜೆಪಿಗೆ ನೀಡಿ ಮತ್ತು ನಮಗೆ 18 ಸ್ಥಾನಗಳನ್ನು ನೀಡಿ ಎನ್ನುವ ನಮ್ಮ ಸೂತ್ರ ಫಲ ನೀಡಿದೆ’ ಎಂದು ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯ ನಾಯಕ ಮತ್ತು ಸಂಸದ ರಾಜು ಶೆಟ್ಟಿ ತಿಳಿಸಿದ್ದಾರೆ.
‘ಮೈತ್ರಿಯಲ್ಲಿರುವ ಸಣ್ಣ ಪಕ್ಷ ಗಳು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಏಳಕ್ಕಿಂತಲೂ ಹೆಚ್ಚು ಸೀಟು ಪಡೆದುಕೊಳ್ಳಲಿವೆ’ ಎಂದು ಶಿವ ಸಂಗ್ರಾಮ ಪಕ್ಷದ ವಿನಾಯಕ ಮೆಟೆ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಏರ್ಪಟ್ಟಿರುವ ಮಹಾಮೈತ್ರಿಯಲ್ಲಿ ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರೀಯ ಸಮಾಜ ಪಾರ್ಟಿ, ಶಿವ ಸಂಗ್ರಾಮ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳಿವೆ.
ಭೇಟಿ ರದ್ದು: ಮೈತ್ರಿಯ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆ ಬಿಕ್ಕಟ್ಟು ಶಮನಗೊಂಡಿದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂಬೈ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಪಕ್ಷದ ವಕ್ತಾರ ಕೇಶವ ಉಪಾಧ್ಯೆ ಹೇಳಿದ್ದಾರೆ.