ಚಳ್ಳಕೆರೆ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂದಿನ ಇಂಗ್ಲಿಷ್ ವ್ಯಾಮೋಹದಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿ ಹೊಂದಬೇಕು ಎಂದು ತಹಶೀಲ್ದಾರ್ ಶ್ರೀಧರಮೂರ್ತಿ ಎಸ್.ಪಂಡಿತ್ ಹೇಳಿದರು.
ಪಟ್ಟಣದ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಮತ್ತು ತಾಲ್ಲೂಕು ಕನ್ನಡ
ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಭಾರತದ ಇತರ ಭಾಷೆಗಳೊಡನೆ ಕನ್ನಡದ ಸಂಬಂಧ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಕನ್ನಡದ ಮಹಾನ್ ಕವಿಗಳು ತಮ್ಮ ಬರಹಗಳ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ರಾಜ್ಯ ನಮ್ಮದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಬಳಸುವ ಮೂಲಕ, ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಹುರುಳಿ ಬಸವರಾಜ್ ಮಾತನಾಡಿ, ಭಾರತ ಹಲವಾರು ಭಾಷೆಗಳನ್ನು ಹೊಂದಿರುವ ದೇಶವಾಗಿದ್ದು, ದಕ್ಷಿಣ ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳು ಪ್ರಧಾನವಾಗಿ ಕಂಡುಬರುತ್ತವೆ. ಕರ್ನಾಟಕದಲ್ಲಿ ಎಲ್ಲಾ ರಾಜ್ಯದ ಜನರು ಬಂದು ನೆಲೆಸುವುದರಿಂದ ಕನ್ನಡಿಗರು ಅವರೊಂದಿಗೆ ಮಾತನಾಡುವಾಗ ಹೆಚ್ಚು ಹೊರ ರಾಜ್ಯದ ಭಾಷೆಯನ್ನು ಬಳಸುವುದು ನಡೆಯುತ್ತಿದೆ. ಕನ್ನಡಿಗರ ಮೃದು ಧೋರಣೆ ಕನ್ನಡ ಭಾಷೆಗೆ ಕಂಠಕವಾಗುತ್ತಿದೆ. ಕನ್ನಡವನ್ನು ಹೆಚ್ಚು ಬಳಸುವುದರಿಂದ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾರಾಯಣಪ್ಪ, ಪ್ರಾಧ್ಯಾಪಕ ಕೆ.ಚಿತ್ತಯ್ಯ, ಬಿಇಒ ಪಿ.ರಾಜಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಜಗದೀಶ್, ಪ್ರಾಂಶುಪಾಲ ಜಿ.ರಾಘವೇಂದ್ರ ನಾಯಕ, ಮುಖ್ಯ ಶಿಕ್ಷಕಿ ಟಿ.ಆರ್.ಪ್ರಮೀಳಾ, ಮಂಜುನಾಥ್, ಎಸ್.ಆರ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.