ನವದೆಹಲಿ: ‘ಸೋನಿಯಾ ಗಾಂಧಿ ತಮ್ಮ ಬಿಳಿ ಚರ್ಮದ ಕಾರಣದಿಂದಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದಾರೆ’ ಎಂಬ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.
‘ಸೋನಿಯಾ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷೆ ಸ್ಥಾನ ಸಿಗಲು ಅವರ ಬಿಳಿ ಚರ್ಮವೇ ಕಾರಣ. ಒಂದು ವೇಳೆ ರಾಜೀವ್ ಗಾಂಧಿ ಅವರು ನೈಜೀರಿಯನ್ ಹೆಣ್ಣನ್ನು ಮದುವೆಯಾಗಿದ್ದರೆ ಅವರನ್ನೂ ಕಾಂಗ್ರೆಸ್ ನಾಯಕರು ತಮ್ಮ ಅಧ್ಯಕ್ಷೆ ಎಂದು ಒಪ್ಪಿಕೊಳ್ಳುತ್ತಿದ್ದರೇ?’ ಎಂದು ಅವರು ಹೇಳಿದ್ದಾರೆ.
ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ಗಿರಿರಾಜ್ ಅವರು ಈ ಬಗ್ಗೆ ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಿರಿರಾಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
‘ಈ ರೀತಿಯ ಹೇಳಿಕೆ ನೀಡಲು ಅವರಿಗೆ ಧೈರ್ಯವಾದರೂ ಹೇಗೆ ಬಂತು. ಇದೊಂದು ಕೀಳುಮಟ್ಟದ ಹೇಳಿಕೆ’ ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಕಿಡಿಕಾರಿದ್ದಾರೆ.
ತಮ್ಮ ಹೇಳಿಕೆಗೆ ಟೀಕೆ ವ್ಯಕ್ತವಾದ ಕೂಡಲೆ ಗಿರಿರಾಜ್ ಸಿಂಗ್ ಅವರು ಬಹಿರಂಗವಾಗಿ ಸೋನಿಯಾ ಗಾಂಧಿ ಅವರ ಕ್ಷಮೆಯಾಚಿಸಿದ್ದಾರೆ.