ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಉಚಿತ ‘ಕಬಾಲಿ’ ಟಿಕೆಟ್ ಭಾಗ್ಯ ಸಿಕ್ಕಿದೆ. ಕ್ಷೇತ್ರದ ಶಾಸಕರಾದ ಮುನಿರತ್ನ ಅವರು ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ‘ಕಬಾಲಿ’ ಚಿತ್ರದ ಟಿಕೆಟ್ ವಿತರಿಸಿದ್ದಾರೆ.
‘ನಾನು ಈ ಹಿಂದೆ ‘ಬಾಹುಬಲಿ’ ಸೇರಿದಂತೆ ನನ್ನ ಕ್ಷೇತ್ರದ ಜನತೆಗೆ ಟಿಕೆಟ್ ಉಚಿತವಾಗಿ ಕೊಡಿಸಿದ್ದೇನೆ. ಹಾಗೇ ‘ಕಬಾಲಿ’ಗೂ ಕೊಟ್ಟಿದ್ದೇನೆ. ಸುದೀಪ್ ಅಭಿನಯದ ‘ಕೋಟಿಗೊಬ್ಬ 2’ ಚಿತ್ರದ ಟಿಕೆಟ್ ಕೊಡಿಸಿ ಎಂದು ಈಗಾಗಲೇ ಸಾಕಷ್ಟು ಪತ್ರಗಳು ಬಂದಿವೆ’ ಎಂದು ಮುನಿರತ್ನ ಹೇಳಿದ್ದಾರೆ. ಆದರೆ ಅವರ ಈ ನಡೆಗೆ ಕನ್ನಡದ ಅನೇಕ ನಿರ್ಮಾಪಕರ ವಿರೋಧವೂ ವ್ಯಕ್ತವಾಗಿದೆ.
ಮುನಿರತ್ನ ಅವರು ಕನ್ನಡ ಚಲನಚಿತ್ರ ನಿರ್ಮಾಪಕರಾಗಿ ಪರಭಾಷೆಯ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಕನ್ನಡ ಚಿತ್ರಗಳು ಮತ್ತು ನಿರ್ಮಾಪಕರಿಗೆ ಮಾಡಿದ ಅನ್ಯಾಯ ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಕೆಲವು ಸದಸ್ಯರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ‘ನಾನೊಬ್ಬ ನಿರ್ಮಾಪಕನಾಗಿ ನನ್ನ ಕ್ಷೇತ್ರದ ಜನತೆಗೆ ಟಿಕೆಟ್ ನೀಡಿಲ್ಲ. ಶಾಸಕನಾಗಿ ಕ್ಷೇತ್ರದ ಜನರ ಬೇಡಿಕೆಗೆ ಸ್ಪಂದಿಸಿದ್ದೇನೆ. ಕನ್ನಡ ನಿರ್ಮಾಪಕರಿಗೆ ಅನ್ಯಾಯ ಮಾಡುವ ಉದ್ದೇಶ ನನಗಿಲ್ಲ’ ಎಂದಿದ್ದಾರೆ.