ಬೆಂಗಳೂರು: ‘ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಶಿಫಾರಸು ಮಾಡಿದಾಗ, ಅಟಲ್ ಬಿಹಾರಿ ವಾಜಪೇಯಿ ಅವರು ಸೂಚಿಸಿದ ಹೆಸರು ಎಂಬ ಕಾರಣಕ್ಕಷ್ಟೇ ಎಡಪಂಥೀಯರೆಲ್ಲ ವಿರೋಧಿಸಿದ್ದೆವು’ ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಹೇಳಿದರು.
ಪಕ್ಷದ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ‘ಎಡಪಂಥೀಯರೆಲ್ಲ ಸೇರಿ ಮಹಿಳೆಯೊಬ್ಬರನ್ನು ಕಲಾಂ ವಿರುದ್ಧ ಕಣಕ್ಕಿಳಿಸಿದ್ದೆವು. ಆದರೆ, ಕಲಾಂ ಅವರು ರಾಷ್ಟ್ರಪತಿ ಹುದ್ದೆಗೇರಿದ ಕೆಲವೇ ದಿನಗಳಲ್ಲಿ ವಾಜಪೇಯಿಯವರದು ಎಂಥ ದೂರದರ್ಶಿತ್ವದ ಆಯ್ಕೆ ಎಂಬ ಅರಿವಾಗಿತ್ತು’ ಎಂದು ಹೇಳಿದರು.
‘ವಾಜಪೇಯಿ ಅವರಲ್ಲದಿದ್ದರೆ ಬೇರೆ ಯಾರೂ ಕಲಾಂ ಅವರನ್ನು ರಾಷ್ಟ್ರಪತಿ ಮಾಡುತ್ತಿರಲಿಲ್ಲ. ದೂರದರ್ಶಿತ್ವವಿದ್ದವರು ಮಾತ್ರ ಇಂಥ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸಾಧ್ಯ. ಈ ವಿಚಾರದಲ್ಲಿ ವಾಜಪೇಯಿ ಅವರ ನಡೆ ಅನುಕರಣೀಯ’ ಎಂದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ಈ ದೇಶದ ಪ್ರಜೆಯಾಗಿ, ಜನರ ಸೇವಕನಾಗಿ ಬದುಕಿದ ಅಪರೂಪದ ವ್ಯಕ್ತಿ ಕಲಾಂ’ ಎಂದರು.
ಹಿರಿಯ ಲೇಖಕಿ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಕಲಾಂ ಅವರು ನೆನಪಿನಲ್ಲಿ ಉಳಿಯುವ ಕೆಲವೇ ರಾಷ್ಟ್ರಪತಿಗಳಲ್ಲಿ ಒಬ್ಬರು’ ಎಂದು ಶ್ಲಾಘಿಸಿದರು.