ಕಾರ್ಕಳ: ‘ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತರ ನಡುವೆ ಗೋಡೆ ಕಟ್ಟಿದೆ. ಬಿಜೆಪಿ ಮಾತ್ರ ಅಲ್ಪಸಂಖ್ಯಾತರ ಹಿತವನ್ನು ಕಾಪಾಡಲು ಸಶಕ್ತವಾಗಿದೆ’ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೆರಾಲ್ಡ್ ಫರ್ನಾಂಡಿಸ್ ಹೇಳಿದರು.
ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿ ತಾಲ್ಲೂಕು ಅಲ್ಪಸಂಖ್ಯಾತ ಮೋರ್ಚಾದ ತಾಲ್ಲೂಕು ಮಟ್ಟದ ಎರಡನೇ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜೆಡಿಎಸ್-–ಬಿಜೆಪಿ ಸಮ್ಮಿಶ್ರ ಸರ್ಕಾರ ಬರುವ ಮುನ್ನ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಕೇವಲ ₨ ೩೨ ಕೋಟಿ ಅನುದಾನ ನೀಡಿದೆ. ಜೆಡಿಎಸ್- – ಬಿಜೆಪಿ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ ₨ 2೫೦ ಕೋಟಿ ಅನುದಾನ ನೀಡುವ ಮೂಲಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದರು. ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ₨ ೪೦೦ ಕೋಟಿಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆಯನ್ನು ರೂಪಿಸಿಲ್ಲ’ ಎಂದು ದೂರಿದರು.
ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಶಾಸಕ ವಿ.ಸುನಿಲ್ ಕುಮಾರ್, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ವಕೀಲ ಎಂ.ಕೆ.ವಿಜಯ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಅಧಿಕಾರಿ, ಕುಕ್ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂತೋನಿ ಡಿಸೋಜ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರದೀಪ್ ಕೋಟ್ಯಾನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಆರೀಫ್ ಕಲ್ಲೊಟ್ಟೆ, ಬಿಜೆಪಿ ನಗರಾಧ್ಯಕ್ಷ ಗಿರಿಧರ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾವ್, ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖ ನಾಯಕರಾದ ಸೋಜನ್ ಜೇಮ್ಸ್, ಹಲೆನ್ ಹಿರ್ಗಾನ, ಮೊಹಮ್ಮದ್ ಮೀರಾ ವೈ, ತೋಮಸ್ ಅಜೆಕಾರು, ಸನ್ನಿ, ಬಿಜು ಕಿರೆಂಚರ್, ಜೋಯ್ ಮಟ್ಟಾಯ್, ಜೆರಿನಾ ಭಾನು, ಟೋಮಿ ಮಾಳ, ಹ್ಯಾರಿಸ್ ಅಬ್ಬಾಸ್ ಸಾಲಿಗ್ರಾಮ, ಜೇಮ್ಸ್ ಜೋರ್ಜ್ ಅಂಡಾರು ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರವೀಂದ್ರ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.