ನವದೆಹಲಿ (ಪಿಟಿಐ): ಕಣಿವೆ ರಾಜ್ಯ ಕಾಶ್ಮೀರ ಬಗ್ಗೆ ಎನ್ಡಿಎ ಸರ್ಕಾರ ಒಂದು ಸಮಗ್ರ ನೀತಿ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ತಿಳಿಸಿದ್ದಾರೆ.
‘ಕಾಶ್ಮೀರದ ಬಗ್ಗೆ ನಾವು ಒಂದು ಸಮಗ್ರ ನೀತಿಯನ್ನು ಸಿದ್ಧಪಡಿಸುತ್ತಿದ್ದೇವೆ. ಶೀಘ್ರವೇ ಅದನ್ನು ಪ್ರಕಟಿಸಲಿದ್ದೇವೆ’ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದೇ ವೇಳೆ ಈಶಾನ್ಯ ರಾಜ್ಯಗಳೊಂದಿಗೆ ಮಾತುಕತೆಗಾಗಿ ನೇಮಿಸಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೂ ಯಾರಾದರನ್ನು ನೇಮಿಸಲಾಗುವುದೇ ಎಂಬ ಪ್ರಶ್ನೆಗೆ ಸಿಂಗ್ ಅವರು ‘ಅಂತಹ ಯೋಚನೆ ಇಲ್ಲ’ ಎಂದಿದ್ದಾರೆ.
ಚುನಾವಣೆ: ಪ್ರವಾಹದಿಂದ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಬಗ್ಗೆ ಅಲ್ಲಿನ ಚುನಾವಣಾ ಆಯೋಗ ನೀಡುವ ವರದಿ ಆಧರಿಸಿ ನಿರ್ಧರಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಭಾನುವಾರ ತಿಳಿಸಿದೆ.
87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅವಧಿ 2015ರ ಜನವರಿ 19ರಂದು ಮುಕ್ತಾಯಗೊಳ್ಳಲಿದೆ.
‘ಅಕ್ಟೋಬರ್ 15ರ ವೇಳೆಗೆ ಅಲ್ಲಿನ ಮುಖ್ಯ ಚುನಾವಣಾಧಿಕಾರಿ ತಮ್ಮ ವರದಿ ಸಲ್ಲಿಸುವ ನಿರೀಕ್ಷೆಗಳಿವೆ. ವರದಿ ಪಡೆದ ಬಳಿಕ ಚುನಾವಣಾ ಸಮಯವನ್ನು ನಿರ್ಧರಿಸಲಿದ್ದೇವೆ’ ಎಂದು ಆಯೋಗ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.