ಇಸ್ಲಾಮಾಬಾದ್ (ಐಎಎನ್ಎಸ್): ‘ಪಾಕಿಸ್ತಾನ ಮತ್ತು ಕಾಶ್ಮೀರವನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಹೇಳಿದ್ದಾರೆ.
‘ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರದ ಜನರ ಬಯಕೆಯಂತೆ ಬಗೆಹರಿಸಬೇಕು. ಹಾಗಾದಲ್ಲಿ ಈ ವಲಯದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಬುಧವಾರ ಇಲ್ಲಿನ ರಾಷ್ಟ್ರೀಯ ರಕ್ಷಣಾ ವಿ.ವಿಯಲ್ಲಿ ನಡೆದ ಸಮಾವೇಶದಲ್ಲಿ ಅವರು ತಿಳಿಸಿದರು.
‘ಶತ್ರುಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಮೂಲಕ ಪಾಕಿಸ್ತಾನದ ಆಂತರಿಕ ಭದ್ರತೆಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಕೆಟ್ಟ ಸಂಚುಗಳನ್ನು ಎದುರಿಸುವ ಶಕ್ತಿ ಪಾಕ್ಗೆ ಇದೆ’ ಎಂದು ರಹೀಲ್ ಹೇಳಿರುವುದನ್ನು ‘ಡಾನ್’ ದಿನಪತ್ರಿಕೆ ವರದಿ ಮಾಡಿದೆ.
ಭಾರತದ ತೀಕ್ಷ್ಣ ಪ್ರತಿಕ್ರಿಯೆ: ರಹೀಲ್ ಷರೀಫ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್ ಅವರು, ‘ಪಾಕಿಸ್ತಾನವು ತಪ್ಪು ಭಾವನೆಗಳನ್ನು ಇಟ್ಟುಕೊಂಡಿರಲಿ. ಆದರೆ ವಾಸ್ತವ ಪರಿಸ್ಥಿತಿಗೆ ಅದು ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದಿದ್ದಾರೆ.