ತಿರುವನಂತಪುರ (ಪಿಟಿಐ): ‘ಕೆಎಸ್ಆರ್ಟಿಸಿ’ ಹೆಸರಿನ ವಿಷಯವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವಿನ ಕಾನೂನು ಸಮರ ತೀವ್ರವಾಗುತ್ತಿದೆ. ಎರಡೂ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಇದೇ ಹೆಸರು ಬಳಕೆಯಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ.
‘ಕೆಎಸ್ಆರ್ಟಿಸಿ’ ಹೆಸರು ಬಳಕೆ ಮಾಡದಿರುವಂತೆ ಕಳೆದ ವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೇರಳ ಸರ್ಕಾರಕ್ಕೆ ಪತ್ರ ಬರೆದಿತ್ತು.
‘ನಮಗೆ ಈ ಸಂಬಂಧ ಕರ್ನಾಟಕದಿಂದ ಪತ್ರ ಬಂದಿದೆ. ನಾವು ಟ್ರೇಡ್್ ಮಾರ್ಕ್್ ನೋಂದಣಿ ಪ್ರಾಧಿಕಾರದ ಮುಂದೆ (ಟಿಎಂಆರ್) ಆಕ್ಷೇಪಣೆ ಸಲ್ಲಿಸುತ್ತೇವೆ’ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಂಟನಿ ಚಾಕೊ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಕೇರಳವು ಈ ಹೆಸರನ್ನು ೧೯೫೩ರಿಂದಲೂ ಬಳಸುತ್ತಾ ಬಂದಿದೆ. ಕರ್ನಾಟಕವು ಕಳೆದ ವರ್ಷವಷ್ಟೇ ಈ ಹೆಸರನ್ನು ನೋಂದಣಿ ಮಾಡಿಕೊಂಡಿದೆ. ಆದ್ದರಿಂದ ನಾವು ಈ ಬಗ್ಗೆ ಆಕ್ಷೇಪಣೆ ಸಲ್ಲಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.