ಸುಬ್ರಹ್ಮಣ್ಯ: ಯುವ ಜನಾಂಗಕ್ಕೆ ಸಾಮರಸ್ಯದ ಪಾಠದೊಂದಿಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳ ಪಾತ್ರ ಅಗ್ರಗಣ್ಯ. ಸಮಾಜದ ಸಾಮರಸ್ಯ, ಬಾಂಧವ್ಯ ಹಾಗೂ ಪ್ರೀತಿ ವಿಶ್ವಾಸಗಳು ಅಭಿವೃದ್ಧಿ ಹೊಂದಲು ಕ್ರೀಡಾ ಪಂದ್ಯಾಟಗಳು ಸಹಕಾರ ನೀಡು ತ್ತವೆ. ಸೌಹಾರ್ದಯುತ ಜೀವನಕ್ಕೆ ನಮ್ಮ ಮಣ್ಣಿನ ಕ್ರೀಡೆ ಕಬಡ್ಡಿಯ ಕೊಡುಗೆ ಅನನ್ಯ ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿ ನಾಗೇಶ್ ಕದ್ರಿ ಹೇಳಿದರು.
ಇಲ್ಲಿನ ದೇವರಗದ್ದೆಯ ಮಿತ್ರ ಬಳಗವು ದೇವರಗದ್ದೆಯಲ್ಲಿ ಭಾನುವಾರ ಏರ್ಪಡಿಸಿದ್ದ 11ನೇ ವರ್ಷದ ಹೊನಲು ಬೆಳಕಿನ ಪುರುಷರ ಅಂತರರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಬಡ್ಡಿ ಪಂದ್ಯಾಟವನ್ನು ಉದ್ಯಮಿ ಹರೀಶ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ರೀಡಾಂಗಣವನ್ನು ಮುಖ್ಯಗುರು ಕೆ.ಯಶವಂತ ರೈ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಕಬಡ್ಡಿ ಪ್ರತಿಭೆ ಸುಖೇಶ್ ಹೆಗಡೆ ಅವರನ್ನು ಮಿತ್ರ ಬಳಗದ ಗೌರವಾಧ್ಯಕ್ಷ ಸತೀಶ್.ಕೆ ಮಾನಾಡು ಸನ್ಮಾನಿಸಿದರು. ಯಶವಂತ ರೈ ಅವರನ್ನು ಠಾಣಾಧಿಕಾರಿ ನಾಗೇಶ್ ಕದ್ರಿ ಗೌರವಿಸಿದರು.
ಜೇಸಿಸ್ ಪೂರ್ವ ವಲಯಾಧಿಕಾರಿ ರಾಜೇಶ್ ಎನ್.ಎಸ್ ಅಧ್ಯಕ್ಷತೆ ವಹಿಸಿದ್ದರು. ಸುಖೇಶ್ ಹೆಗಡೆ, ಕೆ.ಯಶವಂತ ರೈ, ತಾಲ್ಲೂಕು ಪಂಚಾಯಿತಿ ಸದಸ್ಯೆ ವಿಮಲಾ ರಂಗಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ.ಡಿ, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋನಪ್ಪ ಮಾನಾಡು, ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಏನೆಕಲ್, ಬಿ.ಎಂ.ಎಸ್. ಅಟೋಚಾಲಕ ಮಾಲಕ ಸಂಘದ ಅಧ್ಯಕ್ಷ ಧರ್ಮಪಾಲ ಬೀಡಿನಗದ್ದೆ, ಮೈತ್ರಿ ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ, ದಾನಿಗಳಾದ ಗಂಗಾಧರ್ ಎಸ್.ಎನ್ ಮತ್ತು ಗುಡ್ಡಪ್ಪ ಗೌಡ ಕುಲ್ಕುಂದ ಮುಖ್ಯ ಅತಿಥಿಗಳಾಗಿದ್ದರು. ಮಿತ್ರ ಬಳಗದ ಗೌರವಾಧ್ಯಕ್ಷ ಸತೀಶ್.ಕೆ ಮಾನಾಡು, ಅಧ್ಯಕ್ಷ ಚಿದಾನಂದ ಅಗಳಿಕಜೆ, ಕಾರ್ಯದರ್ಶಿ ಮಹೇಶ್ ಕುಮಾರ್ ವೇದಿಕೆಯಲ್ಲಿದ್ದರು.
ವಿದ್ಯಾ ಪ್ರಾರ್ಥಿಸಿ ದರು. ಭರತ್ ಕಲ್ಲಜಡ್ಕ ಸ್ವಾಗತಿಸಿದರು. ಹರೀಶ್ ದೇವರಗದ್ದೆ ವಂದಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನಿರೂಪಿಸಿದರು. ಬಳಿಕ ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟಗಳು ನಡೆದವು. ಕೇರಳ ಮತ್ತು ಕರ್ನಾಟಕ ರಾಜ್ಯಗಳ 60ಕ್ಕೂ ಅಧಿಕ ತಂಡಗಳು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.