ಬೆಂಗಳೂರು: ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳು ನಗರದಾದ್ಯಂತ ಮಂಗಳವಾರ ನಡೆದವು.
ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸದಿದ್ದರೂ ಬಹುತೇಕ ಖಾಸಗಿ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳು ರಜೆ ನೀಡಿ, ಅಗಲಿದ ರಾಷ್ಟ್ರನಾಯಕನಿಗೆ ಗೌರವ ಸಲ್ಲಿಸಿದವು.
‘ಜನಸಾಮಾನ್ಯರ ರಾಷ್ಟ್ರಪತಿ’ ಎಂದೇ ಖ್ಯಾತಿ ಗಳಿಸಿದ ಕಲಾಂ ಅವರ ನಿಧನಕ್ಕೆ ನಗರದ ಮೂಲೆ ಮೂಲೆಗಳಲ್ಲಿ ಜನಸಾಮಾನ್ಯರು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಪುಸ್ತಕಕ್ಕೆ ಬೇಡಿಕೆ: ನಗರದ ಅನೇಕ ಪುಸ್ತಕ ಮಳಿಗೆಗಳಲ್ಲಿ ಮಂಗಳವಾರ ಅಬ್ದುಲ್ ಕಲಾಂ ಆತ್ಮಚರಿತ್ರೆ ಮತ್ತು ಅವರ ರಚಿಸಿರುವ ಪುಸ್ತಕಗಳು ಮಾರಾಟ ಜೋರಿನಿಂದ ನಡೆದಿತ್ತು.
ಸಾಮಾಜಿಕ ತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಮೊಬೈಲ್ ಸಂದೇಶಗಳಲ್ಲಿ ಕಲಾಂ ಅವರ ನುಡಿಮುತ್ತುಗಳನ್ನು ಹಂಚಿಕೊಳ್ಳುವ ಮೂಲಕ ಯುವ ಜನತೆ ಕ್ಷಿಪಣಿ ಪಿತಾಮಹನಿಗೆ ಗೌರವ ನಮನ ಸಲ್ಲಿಸಿದರು.