ನವದೆಹಲಿ (ಐಎಎನ್ಎಸ್): ಗೋಮಾಂಸ ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ಗೋಮಾಂಸ ತಿನ್ನಲೇಬೇಕೆಂದವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಗೋಮಾಂಸ ನಿಷೇಧ ಕ್ರಮದಲ್ಲಿ ಲಾಭ ನಷ್ಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಿಂದೂಗಳಿಗೆ ಸಂಬಂಧಿಸಿದಂತೆ ಇದು ಅತಿ ಸೂಕ್ಷ್ಮದ ವಿಚಾರ. ಲಾಭ ನಷ್ಟಕ್ಕಿಂತ ಇಲ್ಲಿ ವಿಶ್ವಾಸ ಮತ್ತು ನಂಬಿಕೆಯೇ ಮುಖ್ಯವಾದದ್ದು ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಗೋಮಾಂಸ ತಿನ್ನದಿದ್ದರೆ ಸತ್ತೇ ಹೋಗುತ್ತೇನೆ ಎನ್ನುವವರು ಬೇಕಾದರೆ ಪಾಕಿಸ್ತಾನಕ್ಕೋ, ಅರಬ್ ರಾಷ್ಟ್ರಗಳಿಗೋ ಅಥವಾ ಗೋಮಾಂಸ ಸಿಗುವ ಇನ್ನಿತರ ಯಾವುದೇ ದೇಶಗಳಿಗೆ ಬೇಕಾದರೆ ಹೋಗಲಿ, ಆದರೆ, ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
ಗೋಮಾಂಸ ನಿಷೇಧವನ್ನು ಮುಸ್ಲಿಮರು ಕೂಡ ಸ್ವಾಗತಿಸಿದ್ದಾರೆ ಎಂದು ನಖ್ವಿ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
‘ಕೇಂದ್ರ ಬಿಜೆಪಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಬಡತನ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ದೇಶದಾದ್ಯಂತ ಸಂಪೂರ್ಣ ಗೋಮಾಂಸ ನಿಷೇಧ ಜಾರಿಗೊಳಿಸಿದರೆ ಇದರಿಂದ ಅಲ್ಪಸಂಖ್ಯಾತ ಸಮುದಾಯ ಶೋಷಣೆ ಆಗುತ್ತದೆ. ಮುಖ್ಯವಾಗಿ ಮುಸ್ಲಿಮರು, ಕ್ರೈಸ್ತರು ಹೆಚ್ಚಿರುವ ಗೋವಾ, ಜಮ್ಮು–ಕಾಶ್ಮೀರ, ಕೇರಳದಲ್ಲಿ ಇದರಿಂದ ಬಡವರ ಆಹಾರವನ್ನೇ ಕಸಿದುಕೊಂಡು ಅವರನ್ನು ಇನ್ನಷ್ಟು ಬಡತನಕ್ಕೆ ದೂಡಿದಂತೆ ಆಗುತ್ತದೆ’ ಎಂದು ಎಐಎಂಎಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ನಖ್ವಿ ಈ ಹೇಳಿಕೆ ನೀಡಿದ್ದಾರೆ.