ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಸಂಘಟನೆಗಳು ‘ಘರ್ ವಾಪಸಿ’ ಹೆಸರಲ್ಲಿ ನಡೆಸುತ್ತಿರುವ ಮತಾಂತರ ಹಾಗೂ ದೇಶದಲ್ಲಿ ಚರ್ಚ್ಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಇಂಡಿಯನ್ ಕ್ರಿಶ್ಚಿಯನ್ ಯುನೈಟೆಡ್ ಫೋರಂ (ಐಸಿಯುಎಫ್) ಖಂಡಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಯುಎಫ್ ಅಧ್ಯಕ್ಷ ಟಿ.ಜೆ. ಅಬ್ರಹಾಂ, ‘ಘರ್ ವಾಪಸಿ ಕಾರ್ಯಕ್ರಮದಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಕ್ರಿಶ್ಚಿಯನ್ ಸಮುದಾಯವೂ ಆತಂಕಗೊಂಡಿದೆ. ಆದರೆ, ಕ್ರೈಸ್ತರು ಇದರ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಕ್ರಿಶ್ಚಿಯನ್ ಧರ್ಮದ ಮೇಲೆ ವಿಶ್ವಾಸ ಇಲ್ಲದವರು ಹೋಗುತ್ತಿದ್ದಾರೆ. ಅಚಲ ನಂಬಿಕೆ ಇರುವವರನ್ನು ಮತಾಂತರಗೊಳಿಸಲು ಸಾಧ್ಯವಿಲ್ಲ’ ಎಂದರು.
ಐಸಿಯುಎಫ್ನ ಉಪಾಧ್ಯಕ್ಷ ಸಿಲ್ವಿಯನ್ ನರೋನಾ, ಪ್ರಧಾನ ಕಾರ್ಯದರ್ಶಿ ಐಡಾ ಡಿ’ಕುನಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.