ನವದೆಹಲಿ (ಪಿಟಿಐ): ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತ ಪ್ರತಿಪಕ್ಷವೆಂದು ಗುರುತಿಸಿ, ಅದರ ಸಭಾನಾಯಕರಿಗೆ ವಿರೋಧ ಪಕ್ಷದ ನಾಯಕ ಸ್ಥಾನಮಾನ ನೀಡುವ ಬಗ್ಗೆ ನೂತನ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಯಾವುದೇ ಭರವಸೆ ನೀಡಿಲ್ಲ.
‘ಈ ವಿಷಯದ ಬಗ್ಗೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಇಂತಹ ಸನ್ನಿವೇಶ (ಅಧಿಕೃತ ವಿರೋಧ ಪಕ್ಷಕ್ಕೆ ಅಗತ್ಯವಾದ ಸಂಖ್ಯಾಬಲದ ಕೊರತೆ) ಹಿಂದೆಯೂ ಉಂಟಾಗಿತ್ತು. ಆಗ ತೆಗೆದುಕೊಂಡ ತೀರ್ಮಾನಗಳನ್ನು ಅಧ್ಯಯನ ಮಾಡಬೇಕಿದೆ. ಜತೆಗೆ ಭವಿಷ್ಯದ ದೃಷ್ಟಿಯಿಂದಲೂ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸ್ಪೀಕರ್ ಆಗಿ ಆಯ್ಕೆಯಾದ ನಂತರ ಶುಕ್ರವಾರ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಇದು ಕಿರು ಅವಧಿಯ ಅಧಿವೇಶನ ಆಗಿರುವ ಕಾರಣ ಉಪಸ್ಪೀಕರ್ ಅವರ ಆಯ್ಕೆ ಈ ಅಧಿವೇಶನದಲ್ಲೇ ಆಗುವುದು ಕಷ್ಟ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಜುಲೈ 28ರೊಳಗೆ ಬಜೆಟ್ಗೆ ಸಂಸತ್ತಿನ ಅಂಗೀಕಾರ ದೊರಕಬೇಕಿದೆ. ಇದಕ್ಕೆ ಲೋಕಸಭೆಯಲ್ಲಿ ಎಲ್ಲಾ ಪಕ್ಷಗಳ ಸಹಕಾರ ಅಗತ್ಯ’ ಎಂದು ಸುಮಿತ್ರಾ ಹೇಳಿದರು.
ಸುಮಿತ್ರಾ ಅವಿರೋಧ ಆಯ್ಕೆ
ಲೋಕಸಭೆಯ ಹಿರಿಯ ಸದಸ್ಯೆ ಬಿಜೆಪಿಯ ನಾಯಕಿ ಸುಮಿತ್ರಾ ಮಹಾಜನ್ ಅವರು 16ನೇ ಲೋಕಸಭೆಯ ಸ್ಪೀಕರ್ ಆಗಿ ಶುಕ್ರವಾರ ಅವಿರೋಧವಾಗಿ ಆಯ್ಕೆ ಆದರು. ಈ ಮೂಲಕ ಲೋಕಸಭೆಯ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾದರು.
ಕಾಂಗ್ರೆಸ್ನ ಮೀರಾ ಕುಮಾರ್ ಅವರು 15ನೇ ಲೋಕಸಭೆಯ ಸ್ಪೀಕರ್ ಆಗಿದ್ದರು. ಸುಮಿತ್ರಾ ಮಹಾಜನ್ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದರು. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅನುಮೋದಿಸಿದರು.
‘ಸ್ಪೀಕರ್’ ಹುದ್ದೆಗೆ ಮೃದುಭಾಷಿ
ಲೋಕಸಭೆಯ ಕಲಾಪಗಳನ್ನು ‘ಮಾಸ್ತರ’ರಂತೆ ಸಂಭಾಳಿಸುವ ಗುರುತರವಾದ ಸ್ಪೀಕರ್ ಹುದ್ದೆಯ ಜವಾಬ್ದಾರಿ ಈ ಬಾರಿ ಹಿರಿಯ ಸಂಸದೆ ಹಾಗೂ ಮೃದುಭಾಷಿ ಸುಮಿತ್ರಾ ಮಹಾಜನ್ (71) ಅವರದ್ದಾಗಿದೆ.
ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಗ್ರಾಮದ ಸುಮಿತ್ರಾ ಮಹಾಜನ್ ವಕೀಲಿಕೆಯೊಂದಿಗೆ ವೃತ್ತಿ ಜೀವನ ಆರಂಭಿಸಿದರು. 39ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ಅವರು, 1982ರಲ್ಲಿ ಮೊದಲ ಬಾರಿಗೆ ನಗರಸಭಾ ಸದಸ್ಯರಾದರು.
ನಂತರ ಮಧ್ಯಪ್ರದೇಶದ ಇಂದೋರ್ ಪಾಲಿಕೆಯ ಉಪ ಮೇಯರ್ ಹುದ್ದೆಗೆ ಆಯ್ಕೆಯಾದರು. ಅದಾದ ನಂತರ ಇಂದೋರ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಸೋಲು ಕಂಡರು.
1989ರಲ್ಲಿ ಇಂದೋರ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ ಅವರು ಮತ್ತೆಂದೂ ಹಿಂದಿರುಗಿ ನೋಡುವ ಪ್ರಸಂಗ ಎದುರಾಗಲಿಲ್ಲ. ಸತತ ಎಂಟನೇ ಅವಧಿಗೆ ಸಂಸತ್ ಪ್ರವೇಶಿಸಿದ್ದಾರೆ. ಈ ಸಲ 4.67 ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.