ಬೆಂಗಳೂರು: ‘ಅತ್ಯಂತ ಸೂಕ್ಷ್ಮ ವಿಧಾನಗಳ ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರಿಗೆ ಸಲ್ಲುತ್ತದೆ. ಅವರು ಚಿತ್ರಗಳೇ ಮಾತಾಡುವಂತೆ ಮಾಡಿದ್ದರು’ ಎಂದು ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಬಣ್ಣಿಸಿದರು.
ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ‘ವಿ.ಕೆ.ಮೂರ್ತಿ ಅವರಿಗೆ ಒಂದು ಗೌರವ ಸಮರ್ಪಣೆ’ ಹಾಗೂ ವಿ.ಕೆ.ಮೂರ್ತಿ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡಿದರು.
‘ವಿ.ಕೆ.ಮೂರ್ತಿ ಅವರು ಪ್ರತಿ ಚಿತ್ರೀಕರಣದಲ್ಲಿಯೂ ದೃಶ್ಯವನ್ನು ಕಟ್ಟಿಕೊಡಲು ಮಾಡುತ್ತಿದ್ದ ಪ್ರಯತ್ನ ಅನನ್ಯವಾದುದು. ಪ್ರತಿ ಬಾರಿಯೂ ಅವರು ಹೊಸತನವನ್ನು ಹುಡುಕುತ್ತಿದ್ದರು. ಚಿತ್ರೀಕರಣದಲ್ಲಿ ಪ್ರಯೋಗ ಮಾಡುತ್ತಿದ್ದರು. ಆ ಕುರಿತು ಕೇಳಿದರೆ, ‘ಏನೋ ಸ್ಟಂಟ್ ಮಾಡ್ತೇವೆ’ ಎಂಬುದು ಅವರ ಸಾಮಾನ್ಯ ಡೈಲಾಗ್ ಆಗಿರುತ್ತಿತ್ತು’ ಎಂದರು.
‘ಬಾಜಿ, ಜಾಲ್, ಪ್ಯಾಸಾ, ಕಾಗಜ್ ಕಾ ಫೂಲ್, ಸಾಹಿಬ್, ಬಿವಿ ಔರ್ ಗುಲಾಮ್, 12 ಒ ಕ್ಲಾಕ್, ಜಿದ್ದಿ, ಲವ್ ಇನ್ ಟೋಕಿಯೋ ಇತ್ಯಾದಿ ಚಿತ್ರಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ. ಗುರುದತ್ ಅವರ ಚಿತ್ರಗಳಿಗೆ ಕಲಾತ್ಮಕತೆ, ಕಾವ್ಯ ಗುಣ ದೊರೆಯುವಲ್ಲಿ ಮೂರ್ತಿಯವರ ಕೊಡುಗೆ ಅನುಪಮವಾದದ್ದು’ ಎಂದರು.
‘ಕಪ್ಪು ಬಿಳುಪಿನಲ್ಲಿ ತಯಾರಾದ ಚಿತ್ರಗಳಲ್ಲಿಯೂ ಮೂರ್ತಿ ಅವರ ಕ್ಯಾಮೆರಾ ಕೈಚಳಕವೇ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ. ಅವರು ದೃಶ್ಯವನ್ನು ಚಿತ್ರೀಕರಿಸುವಲ್ಲಿ ಹೊರಹೊಮ್ಮಿಸಿದ ಪ್ರತಿಭಾವಂತಿಕೆಯಿಂದ ಉಳಿದೆಲ್ಲ ಕ್ಯಾಮೆರಾಮನ್ಗಳಿಗಿಂತ ಭಿನ್ನವಾಗಿ ಕಾಣುತ್ತಿದ್ದರು’ ಎಂದು ಹೇಳಿದರು.