ಉಡುಪಿ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಪ್ರಯುಕ್ತ ಹಮ್ಮಿಕೊಂಡ ಕಡೆಕಾರು, ಕುತ್ಪಾಡಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಂತಹ ಹಲವು ಪ್ರಮುಖ ಯೋಜನೆಗಳನ್ನು ನೀಡಿದೆ. ರೈತರ ಸಾಲ ಮನ್ನಾ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲದೆ, ಕಡೆಕಾರು, ಕುತ್ಪಾಡಿ ಗ್ರಾಮದ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನವನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮಾತನಾಡಿ, ಕರ್ನಾಟಕಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ನಡೆದಿದ್ದರೂ ಬಿಜೆಪಿ ಮುಖಂಡರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಮೃತಪಟ್ಟ ರೈತ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡುತ್ತಿದೆ ಎಂದರು. ಉದ್ಯಾವರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಆನಂದ್ ಹಾಗೂ ಕಡೆಕಾರು ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಸರಸ್ವತಿ ಸತೀಶ್ ಕೋಟ್ಯಾನ್ ಮತಯಾಚಿಸಿದರು.
ಪಕ್ಷದ ಮುಖಂಡರಾದ ದಿವಾಕಾರ ಕುಂದರ್. ಕೇಶವ ಕೋಟ್ಯಾನ್, ವಾಮನ ಬಂಗೇರ, ಲಕ್ಷ್ಮೀಕಾಂತ್, ಮೀನಾಕ್ಷಿ ಮಾಧವ ಬನ್ನಂಜೆ, ಧರ್ಮಪಾಲ, ವನಜ ಜಯಕರ, ತಾರಾನಾಥ ಸುವರ್ಣ, ಕುಶಲ್ ಶೆಟ್ಟಿ, ಜನಾರ್ದನ ಭಂಡಾರ್ಕರ್ ಭಾಸ್ಕರ್ ರಾವ್ ಕಿದಿಯೂರು, ವಿಜಯ ಪೂಜಾರಿ, ಯುವರಾಜ, ಅಮೃತಾ ಕೃಷ್ಣಮೂರ್ತಿ, ಗಣೇಶ್ ನೆರ್ಗಿ, ಬಿ.ಕೆ. ಸೋಮನಾಥ್, ಲಕ್ಷ್ಮಣ್, ಸುರೇಶ್, ಸುಜಯ ಪೂಜಾರಿ, ಭಾಸ್ಕರ, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.