ಬೆಂಗಳೂರು: ‘ಪ್ರತಿಯೊಬ್ಬ ಕೃಷಿ ತಜ್ಞರ ಸಂಶೋಧನಾ ಬರಹಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆಯಬೇಕು’ ಎಂದು ಸಾಹಿತಿ ಡಾ.ಕೋ.ಚೆನ್ನಬಸಪ್ಪ ಅಭಿಪ್ರಾಯಪಟ್ಟರು. ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ನಗರದಲ್ಲಿ ಗುರುವಾರ ಆಯೋಜಿಸಿದ್ದ 46ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬರಹ ಎಂದಿಗೂ ನಶಿಸಲಾರದು. ಅದರ ಮೂಲಕ ಮುಂದಿನ ಪೀಳಿಗೆಗೆ ಕೃಷಿ ತಜ್ಞರ ಮಹತ್ಕಾರ್ಯವನ್ನು ದಾಖಲಿಸಿಡುವ ಜತೆಗೆ ಜನರಿಗೆ ತಲುಪಿಸುವ ಕಾರ್ಯವನ್ನು ಸಂಸ್ಥೆ ಮಾಡಬೇಕು. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿಯೇ ಕೃಷಿ ಸಂಬಂಧಿ ಆಕಾಶವಾಣಿ ಕಾರ್ಯಕ್ರಮ ರೂಪಿಸಬೇಕು. ಪ್ರತಿಭಾವಂತರನ್ನು ಗುರುತಿಸಿ ಗೌರವಿಸಬೇಕು’ ಎಂದು ಹೇಳಿದರು.
‘ಕೃಷಿ ವಿಜ್ಞಾನದಲ್ಲಿ ಮಹಿಳೆಯರಿಗೂ ಸಮನಾದ ಪಾಲು ದೊರೆಯಬೇಕು. ಈ ಸಂಸ್ಥೆಯಲ್ಲಿರುವ ಎಲ್ಲರಲ್ಲಿ ಕಾಣುವ ಸಾಮರಸ್ಯ ಹೊರಗಡೆಯೂ ಕಾಣಿಸಿಕೊಳ್ಳಬೇಕು. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿನ ಜನರೊಂದಿಗೆ ಸಾಮರಸ್ಯದಿಂದ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.
‘ಶೇ 80ರಷ್ಟು ಒಕ್ಕಲುತನ ಹೊಂದಿರುವ ನಮ್ಮ ದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು, ಭೂ ಬ್ಯಾಂಕ್-ಗಳಿಂದಾಗಿ ಕೃಷಿ ಕಣ್ಮರೆಯಾಗುತ್ತಿದೆ. ವಿದೇಶಿ ಉತ್ಪನ್ನಗಳ ಆಮದು ಹೆಚ್ಚುತ್ತಿದೆ. ಹಳ್ಳಿಯ ಜನರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕೃಷಿ ತಜ್ಞರು ಜನರನ್ನು ಎಚ್ಚರಗೊಳಿಸಬೇಕು’ ಎಂದರು. ಕಾರ್ಯಕ್ರಮದಲ್ಲಿ 47 ಜನ ಹಿರಿಯ ಕೃಷಿ ತಂತ್ರಜ್ಞರನ್ನು ಸನ್ಮಾನಿಸಲಾಯಿತು.