ಐಜ್ವಾಲ್ (ಪಿಟಿಐ): ಜನಾಂಗೀಯ ನಿಂದನೆ ಸಲ್ಲ ಎಂದಿರುವ ಮಿಜೋರಾಂ ಮುಖ್ಯಮಂತ್ರಿ ಲಲ್ಥನ್ಹಾವಲಾ, ಯಾವುದೇ ವಿಧದ ಇಂತಹ ನಿಂದನೆಯನ್ನು ತಾವು ತೀವ್ರ ವಿರೋಧಿಸುವುದಾಗಿ ಹೇಳಿದ್ದಾರೆ.
ಮಿಜೋರಾಂ ವಿಧಾನಸಭೆಯ ಮಾಜಿ ಶಾಸಕರ ಸಂಘದ (ಎಫ್ಎಲ್ಎಎಂ) 20ನೇ ವರ್ಷದ ವಾರ್ಷಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ದೇಶದ ಇತರ ಭಾಗಗಳಲ್ಲಿ ಈಶಾನ್ಯ ರಾಜ್ಯಗಳ ಜನರನ್ನು ಭಾರತೀಯರೆಂದು ಪರಿಗಣಿಸುತ್ತಾರೋ, ಇಲ್ಲವೋ ಎಂಬ ಅನುಮಾನ ಬಹಳಷ್ಟು ಸಾರಿ ನನ್ನನ್ನು ಕಾಡಿದೆ’ ಎಂದರು.
‘ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ಮಧ್ಯೆ ಇರುವ ಗಡಿ ಸಮಸ್ಯೆಯಿಂದ ಆಗಾಗ ಘರ್ಷಣೆಗಳು ಆಗುತ್ತಿವೆ. ಈ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಗಡಿ ಗುರುತು ಆಯೋಗ ರಚಿಸುವಂತೆ ಕೇಂದ್ರವನ್ನು ಪದೇ ಪದೇ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ ಕೇಂದ್ರ ಕ್ರಮ ಕೈಗೊಂಡಿಲ್ಲ’ ಎಂದರು.
ದೆಹಲಿ ಮತ್ತು ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯಗಳ ಯುವಕರ ಮೇಲೆ ನಡೆದ ಹಲ್ಲೆ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಅವರು, ಜನಾಂಗೀಯ ನಿಂದನೆ ತಡೆಯಲು ಕೇಂದ್ರ ಸರ್ಕಾರ ಶಾಸನ ರಚಿಸಬೇಕು ಎಂದು ಒತ್ತಾಯಿಸಿದ್ದರು.