ಬೆಂಗಳೂರು: ‘ಉತ್ತಮ ಆರಂಭ ಲಭಿಸಿದರೆ ಮುಂದಿನ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ. ಆದ್ದರಿಂದ ಗೆಲುವಿನ ಆರಂಭ ಪಡೆಯಬೇಕು ಎನ್ನುವುದು ನಮ್ಮ ಗುರಿ’ ಎಂದು ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡದ ಉಪನಾಯಕ ವಿ.ಆರ್. ರಘುನಾಥ್ ಹೇಳಿದರು.
ಪುರುಷರ ಹಾಕಿ ತಂಡ ಏಷ್ಯನ್ ಕೂಟದಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದೆ. ಇದೇ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಚೀನಾ, ಒಮನ್ ಮತ್ತು ಶ್ರೀಲಂಕಾ ತಂಡಗಳಿವೆ. ಈ ತಂಡಗಳಲ್ಲಿ ಭಾರತವೇ (9ನೇ ರ್ಯಾಂಕ್) ಉತ್ತಮ ಸ್ಥಾನ ಹೊಂದಿದೆ. ಕರ್ನಾಟಕದ ಎಸ್.ವಿ. ಸುನಿಲ್ ಮತ್ತು ನಿಕಿನ್ ತಿಮ್ಮಯ್ಯ ಅವರೂ ತಂಡದಲ್ಲಿದ್ದಾರೆ.
ಇಂಚೆನ್ನಿಂದ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಘುನಾಥ್, ‘ರಕ್ಷಣಾ ವಿಭಾಗಕ್ಕೆ ಹೆಚ್ಚು ಒತ್ತು ನೀಡಿ ಅಭ್ಯಾಸ ನಡೆಸುತ್ತಿದ್ದೇವೆ. ಫೀಲ್ಡ್ ಜೊತೆಗೆ ‘ಜಿಮ್’ನತ್ತಲೂ ಗಮನ ಹರಿಸುತ್ತಿದ್ದೇವೆ. ಉತ್ತಮ ಫಿಟ್ನೆಸ್ ಇದ್ದರೆ ಮಾತ್ರ ಎದುರಾಳಿಗೆ ಪ್ರಬಲ ಸವಾಲು ಒಡ್ಡಲು ಸಾಧ್ಯವಾಗುತ್ತದೆ’ ಎಂದರು.