ತುಮಕೂರು: ‘ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಗರ ಸಾರಿಗೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಆಗಸ್ಟ್ ತಿಂಗಳಲ್ಲಿ ಸುಮಾರು 800 ಬಸ್ ಗಳನ್ನು ಹೊಸದಾಗಿ ಖರೀದಿಸಿ ಈ ಸೇವೆಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಕೆಎಸ್ಆರ್ಟಿಸಿ ಬಸ್ 3ನೇ ಘಟಕ (ಡಿಪೋ) ಉದ್ಘಾಟಿಸಿ ಮಾತನಾಡಿದರು. ‘ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ನಗರ ಸಾರಿಗೆ ಆರಂಭಿಸಲಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಈ ಸೇವೆ ಆರಂಭಿಸಲಾಗುವುದು. ಅಷ್ಟೇ ಅಲ್ಲದೇ, ಒಂದು ಲಕ್ಷ ಜನಸಂಖ್ಯೆ ಇರುವ ಪ್ರದೇಶದಲ್ಲೂ ನಗರ ಸಾರಿಗೆ ಸೇವೆ ಕಲ್ಪಿಸಲು ಸರ್ಕಾರ ಉತ್ಸುಕವಾಗಿದೆ’ ಎಂದು ವಿವರಿಸಿದರು.
‘ಕೆಎಸ್ಆರ್ಟಿಸಿ ಅಥವಾ ಬಿಎಂಟಿಸಿಯಾಗಲಿ, ಬಸ್ ಸೌಕರ್ಯ ಕಲ್ಪಿಸಿ ಎಂದು ಎಲ್ಲಿ ಸಾರ್ವಜನಿಕರಿಂದ ಬೇಡಿಕೆ ಇರುತ್ತದೆಯೋ ಅಲ್ಲಿ ಬಸ್ ಓಡಿಸುವುದು ಕಡ್ಡಾಯವಾಗಿದೆ’ ಎಂದರು.