ಕೋಲ್ಕತ್ತಾ (ಐಎಎನ್ಎಸ್): ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದ ಸೃಂಜಯ್ ಬೋಸ್ ಅವರನ್ನು ಸಿಬಿಐ ಬಂಧಿಸಿರುವ ಬಗ್ಗೆ ಪಕ್ಷದ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೇಂದ್ರ ಸರ್ಕಾರ ಪಕ್ಷಭೇದ ತೋರುತ್ತಿದೆ. ಜಾತ್ಯತೀತ ಪಕ್ಷಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಲು ನಮ್ಮ ಪಕ್ಷದವರನ್ನು ಬಂಧಿಸಿದ್ದಾರೆ. ನಮ್ಮ ಪಕ್ಷವನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸಿದರೆ, ನಾವೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ನಮ್ಮತ್ತ ಕೆಂಗಣ್ಣು ಬೀರಲು ಬರಬೇಡಿ. ನಾವು ನಿಮ್ಮನ್ನು ಅವಲಂಬಿಸಿಲ್ಲ. ಹೆದರಿಕೆಯಿಂದ ಸೋನಿಯಾ ಗಾಂಧಿ ಅವರಂತಹ ಮುಖಂಡರು ಈ ಬಗ್ಗೆ ಪ್ರತಿಕ್ರಿಯಿಸದೆ ಸುಮ್ಮನ್ನಿದ್ದಾರೆ. ಆದರೆ ನನಗೆ ಯಾವ ಭಯವೂ ಇಲ್ಲ, ನಾನು ಸುಮ್ಮನಿರುವುದೂ ಇಲ್ಲ. ಇದನ್ನು ವಿರೋಧಿಸಿ ನವೆಂಬರ್ 24ರಂದು ರ್್ಯಾಲಿ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಕುರಿತು ಟೀಕಿಸಿದ ಮಮತಾ ಬ್ಯಾನರ್ಜಿ, ‘ದೇಶದ ಆಡಳಿತ ವಹಿಸಿಕೊಂಡಿರುವ ವ್ಯಕ್ತಿ ದೇಶದೊಳಗೆ, ದೇಶದ ಜನರೊಂದಿಗೆ ಎಷ್ಟು ಸಮಯ ಕಳೆದಿದ್ದಾರೆ? ಅವರ ವಿರುದ್ಧವೇ ಹಲವು ಗಲಭೆಗಳಿಗೆ ಕಾರಣರಾದ ಬಗ್ಗೆ ಆರೋಪವಿದೆ. ಹಾಗಿದ್ದಾಗ ನಮ್ಮೆಡೆಗೆ ಹೇಗೆ ಬೆರಳು ತೋರಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.