ಕೃಷಿಕರಿಗಾಗಿ ಹಾಗೂ ಗ್ರಾಮೀಣ ಪ್ರದೇಶದ ಜನತೆಯನ್ನುದ್ದೇಶಿಸಿ ದೂರದರ್ಶನ ಆರಂಭಿಸಿರುವ ‘ಡಿಡಿ ಕಿಸಾನ್’ ವಾಹಿನಿಯನ್ನು ಜನಪ್ರಿಯಗೊಳಿಸಲು ಏರ್ಪಡಿಸುವ ಪ್ರಚಾರ ಕಾರ್ಯದಲ್ಲಿ ಬಾಲಿವುಡ್ನ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಡಿ ನಡೆಯುತ್ತಿರುವ ‘ಡಿಡಿ ಕಿಸಾನ್’ ವಾಹಿನಿಯ ಪ್ರಚಾರ ಕಾರ್ಯದಲ್ಲಿ ದೃಶ್ಯ ಮಾಧ್ಯಮ ಹಾಗೂ ರೇಡಿಯೊ ಜಿಂಗಲ್ಗಳಲ್ಲಿ ಅಮಿತಾಭ್ ಬಚ್ಚನ್ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹಿರಿಯ ದೂರದರ್ಶನ ಅಧಿಕಾರಿ ತಿಳಿಸಿದ್ದಾರೆ.
‘ಬದಲ್ತೆ ಭಾರತ್ ಕಿ ಶಾನ್’ ಎಂಬ ಶೀರ್ಷಿಕೆಯಡಿ ಮೂಡಿಬರುತ್ತಿರುವ ಇದು 24 ಗಂಟೆ ಹಾಗೂ ಏಳೂ ದಿನ ಪ್ರಸಾರವಾಗುವ ವಾಹಿನಿ. ಕೃಷಿ, ಹವಾಮಾನ, ಹೈನುಗಾರಿಕೆ, ಜೇನುಸಾಕಣೆ, ಕೋಳಿ ಸಾಕಣೆ, ಯಂತ್ರೋಪಕರಣ, ಕರಕುಶಲ ಕಲೆ ಎಲ್ಲದರ ಕುರಿತು ಉಪಯುಕ್ತ ಮಾಹಿತಿ ಒದಗಿಸುವುದು ಈ ವಾಹಿನಿಯ ಉದ್ದೇಶವಾಗಿದೆ.
‘ಈ ವಾಹಿನಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವಾಹಿನಿಯ ಧ್ಯೇಯೋದ್ದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಉತ್ತಮ ಪ್ರಚಾರ ಯೋಜನೆಯನ್ನು ರೂಪಿಸಿದ್ದೇವೆ. ಇದರಲ್ಲಿ ಅಮಿತಾಭ್ ಬಚ್ಚನ್ ಪ್ರಮುಖರು’ ಎಂದು ಪ್ರಸಾರ ಭಾರತೀಯ ಹೆಚ್ಚುವರಿ ನಿರ್ದೇಶಕ ರಂಜನ್ ಮುಖರ್ಜಿ ವಾಹಿನಿ ಉದ್ಘಾಟನೆಯ ನಂತರ ತಿಳಿಸಿದರು.
ಜಾಹೀರಾತುಗಳು ಅಷ್ಟೇ ಅಲ್ಲದೆ ‘ಕಿಸಾನ್ ರಥ್’ ಎಂಬ ವ್ಯಾನ್ಗಳನ್ನು ಈ ವಾಹಿನಿಯ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸುಮಾರು 10,000 ಹಳ್ಳಿಗಳಲ್ಲಿ 14 ‘ಕಿಸಾನ್ ರಥ್’ ವ್ಯಾನ್ಗಳು ಪ್ರಯಾಣ ಬೆಳೆಸಿ, ಡಿಡಿ ಕಿಸಾನ್ ವಾಹಿನಿಯ ಪ್ರಚಾರ ಮಾಡುತ್ತದೆ ಎಂದು ಹೇಳಿದ್ದಾರೆ ರಂಜನ್.
ಬೆಳೆಗಳಿಗೆ ತಗಲುವ ರೋಗಗಳು, ವಿವಿಧ ರೋಗಗಳಿಂದ ಬೆಳೆಗಳನ್ನು ರಕ್ಷಿಸುವ ಬಗೆ ಹಾಗೂ ಬೆಳೆ ಇಳುವರಿ ಹೆಚ್ಚಿಸುವ ಕುರಿತು ಭಾರತೀಯ ಹವಾಮಾನ ಇಲಾಖೆಯ (ಐಎಮ್ಡಿ) ವಿಜ್ಞಾನಿಗಳು ಹಾಗೂ ಕೃಷಿ ತಜ್ಞರಿಂದ ಸಲಹೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜನರಿಗೆ ವಸ್ತುನಿಷ್ಠ ಮಾಹಿತಿಗಳನ್ನು ಒದಗಿಸುವ ಉದ್ದೇಶದಿಂದ ಐಎಮ್ಡಿ, ಕೃಷಿ ಸಂಬಂಧಿ ವೈಜ್ಞಾನಿಕ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಜೊತೆ ದೂರದರ್ಶನ ಕೈಜೋಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.