ನವದೆಹಲಿ (ಪಿಟಿಐ): ಯಾವುದೇ ಆರೋಪಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಾನೆ ಎಂಬುದು ಖಚಿತವಾದರೆ ಆತನನ್ನು ಬಂಧಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಆರೋಪಿಯು ತನಿಖಾಧಿಕಾರಿಗಳ ಜತೆ ಪೂರ್ಣ ರೀತಿಯಲ್ಲಿ ಸಹಕರಿಸುತ್ತಿದ್ದು ಆತ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾದರೆ, ಕಸ್ಟಡಿಗೆ ತೆಗೆದುಕೊಳ್ಳುವು
ದನ್ನು ತಪ್ಪಿಸಬಹುದು.
ಒಬ್ಬನನ್ನು ಬಂಧಿಸುವುದೆಂದರೆ ಅದು ಆತನಿಗೆ ಅಪಮಾನ, ತೇಜೋವಧೆ ಮತ್ತು ಅಗೌರವ ಮಾಡಿದಂತೆ’ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಆರ್.ಎಫ್. ನಾರಿಮನ್ ಅವರಿದ್ದ ಪೀಠ ಗುರುವಾರ ಹೇಳಿದೆ. 17 ವರ್ಷಗಳ ಹಿಂದೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿ ತೀರ್ಪು ಪ್ರಕಟಿಸುವ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಬಂಧನವು ಆರೋಪಿ ಮಾತ್ರವಲ್ಲ, ಆತನ ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಂದು ಸಮುದಾಯದ ಮೇಲೂ ಗಂಭೀರ ಪರಿಣಾಮ ಉಂಟುಮಾಡುತ್ತದೆ. ತಪ್ಪಿತಸ್ಥ ಎಂದು ಸಾಬೀತಾದ ನಂತರದ ಬಂಧನ ಮತ್ತು ಅದಕ್ಕೂ ಮುಂಚಿನ ಬಂಧನದ ನಡುವೆ ಜನರು ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಪ್ರಕರಣದ ಗಂಭೀರತೆ ಮತ್ತು ಅದರಲ್ಲಿ ಆರೋಪಿಯ ಪಾತ್ರ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡ ಬಳಿಕವೇ ಒಬ್ಬನನ್ನು ಬಂಧಿಸಬೇಕು. ಅದೇ ರೀತಿ ಆತನ ಬಂಧನಕ್ಕೆ ಏನು ಕಾರಣ ಎಂಬುದನ್ನು ಅಧಿಕಾರಿ ಲಿಖಿತವಾಗಿ ದಾಖಲಿಸಬೇಕು’ ಎಂದು ‘ಸುಪ್ರೀಂ’ ತಿಳಿಸಿದೆ.