ಲಖನೌ (ಪಿಟಿಐ): ‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಧುಚಂದ್ರ ಹಾಗೂ ಪಿಕ್ನಿಕ್ಗೂ ದಲಿತರ ಮನೆಗೆ ಹೋಗುತ್ತಾರೆ’ ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ.
‘ರಾಹುಲ್ ದಲಿತ ಯುವತಿಯನ್ನು ಮದುವೆಯಾಗಿದ್ದರೆ ಅವರ ಅದೃಷ್ಟ ಖುಲಾಯಿಸುತ್ತಿತ್ತು ಮತ್ತು ಈ ದೇಶ ಪ್ರಧಾನಿಯೂ ಆಗುತ್ತಿದ್ದರೇನೋ’ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
‘ರಾಮದೇವ್ ಅಥವಾ ನರೇಂದ್ರ ಮೋದಿ ರಾಹುಲ್ ತರಹ ಒತ್ತಡಕ್ಕೆ ಒಳಗಾಗಿ ಅವಿವಾಹಿತರಾಗಿ ಉಳಿದಿಲ್ಲ. ಉಸ್ ಬೆಚಾರೆ ಕಿ ಭಿ ಕಿಸ್ಮತ್ ಖರಾಬ್ ಹೈ (ರಾಹುಲ್ಗೆ ಅದೃಷ್ಟ ಇಲ್ಲ) ಎಂದೂ ರಾಮದೇವ್ ವ್ಯಂಗ್ಯವಾಡಿದರು.
‘ನೀನು ವಿದೇಶಿ ಹುಡುಗಿಯನ್ನು ಮದುವೆಯಾದರೆ ಈ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಮೊದಲು ಪ್ರಧಾನಿಯಾಗು, ನಂತರ ವಿದೇಶಿ ಹುಡುಗಿಯನ್ನು ಮದುವೆಯಾಗು ಎಂದು ರಾಹುಲ್ ಅಮ್ಮ ಹೇಳುತ್ತಾರೆ. ಆದರೆ ಈ ಹುಡುಗನಿಗೆ ಭಾರತದ ಯುವತಿಯನ್ನು ಮದುವೆಯಾಗಲು ಇಷ್ಟ ಇಲ್ಲ’ ಎಂದೂ ಅವರು ಲೇವಡಿ ಮಾಡಿದರು.
ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಗೊತ್ತಾಗಿದ್ದೇ ತಡ ರಾಮದೇವ್, ‘ಕೆಟ್ಟ ಭಾವನೆಯಿಂದ ಆ ಮಾತು ಆಡಿಲ್ಲ, ದಲಿತರಿಗೆ ನೋವಾದರೆ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ’ ಎಂದರು.