ಧರ್ಮ, ದೇವರು, ಸಂಸ್ಕೃತಿ ಹೆಸರಲ್ಲಿ ಮಹಿಳೆಯರನ್ನು ಅಂಕೆಯಲ್ಲಿಡುವ ಫಿಮೇಲ್ ಜನೆಟೈಲ್ ಮುಟಿಲೇಷನ್(ಎಫ್ಜಿಎಂ)ನಂಥ ಆಚರಣೆಗಳಷ್ಟೇ ಅಲ್ಲದೆ, ಅಂಕೆ ತಪ್ಪಿದವರನ್ನು ‘ರೇಪ್ ಮಾಡಿ’ ಎಂದು ಕರೆಕೊಡಬಲ್ಲವರೂ ಧರ್ಮರಕ್ಷಣೆಯ ಹೆಸರಲ್ಲಿಯೇ ತಲೆಎತ್ತಿಕೊಂಡು ತಿರುಗುತ್ತಿರುವ ಭಂಡತನದ ಕಾಲ ಇದು.
ಇಂತಹ ಹೊತ್ತಿನಲ್ಲಿ ಈ ಧರ್ಮ, ಜಾತಿ, ದೇವರು ಇವೆಲ್ಲವೂ ಮಹಿಳೆಯರನ್ನು ಹಣಿಯುವುದಕ್ಕಾಗಿಯೇ ಇವೆ ಎಂಬ ನಿಚ್ಚಳ ಅರಿವಿನೊಂದಿಗೆ ಎಲ್ಲವನ್ನೂ ಧಿಕ್ಕರಿಸಿ ಅಟ್ಟಾಡಿಸುವ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ನೀಳ್ಗತೆಯ ದಾನಮ್ಮ ಪ್ರಜ್ಞೆಯನ್ನು ಮಹಿಳೆಯರು ಅಗತ್ಯವಾಗಿ ರೂಢಿಸಿಕೊಳ್ಳಬೇಕಿದೆ.