ಚಿಕ್ಕಮಗಳೂರು: ‘ನಿತ್ಯ ದುಡಿಯುತ್ತಿರುವ ಶಕ್ತಿವಂತರು ದುಡಿಮೆಯ ಶೇ 1 ರಷ್ಟಾದರೂ ಪುಣ್ಯದ ಕೆಲಸಕ್ಕೆ ವಿನಿಯೋಗಿಸಿದರೆ, ದೇವರು ಕೃಪೆ ತೋರುತ್ತಾನೆ ಎಂದು ಕಾಫಿ ವ್ಯಾಪಾರಸ್ಥರು ಸಂಘದ ಪ್ರಧಾನ ಕಾರ್ಯದರ್ಶಿ ಕಳವಾಸೆ ರವಿ ತಿಳಿಸಿದ್ದಾರೆ.
ನಗರ ಸಮೀಪದ ಕದ್ರಿಮಿದ್ರಿಯ ಜೀವನ್ ಸಂದ್ಯಾ ವೃದ್ಧಾಶ್ರಮದಲ್ಲಿ ಕಾಫಿ ವ್ಯಾಪಾರಸ್ಥರ ಸಂಘ ಹಮ್ಮಿಕೊಂಡಿದ್ದ ಅನ್ನದಾನದಲ್ಲಿ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ಮನುಷ್ಯನ ಜೀವಿತಾವಧಿಯಲ್ಲಿ ಆರೋಗ್ಯಭಾಗ್ಯ ಮತ್ತು ನೆಮ್ಮದಿ ಇದ್ದರೆ ಅವರಬಾಳು ಹಸನಾಗಿರುತ್ತದೆ. ಹುಟ್ಟಿನಿಂದ ಕಾಲದ ತನಕ ಮಕ್ಕಳನ್ನು ಸಾಕಿ ಸಲಹಿ ಪೋಷಿಸಿದ ಮಾತಾಪಿತೃಗಳನ್ನು ದೇವರಂತೆ ಕಾಣಬೇಕು. ಕೆಲವರು ತಮ್ಮ ಸ್ವಾರ್ಥದ ಜೀವನಕ್ಕಾಗಿ ತಂದೆ, ತಾಯಂದಿರನ್ನು ವೃದ್ಧಾಶ್ರಮಕ್ಕೆ ಬಿಡುತ್ತಾರೆ. ವೃದ್ಧಾಶ್ರಮದ ಪ್ರವೃತ್ತಿ ದೂರಾಗಿ ತುಂಬು ಕುಟುಂಬದ ಜೀವನದೊಂದಿಗೆ ಸಂಸಾರ ನಡೆದಾಗ ಮನುಷ್ಯ ಜೀವನಕ್ಕೆ ಅರ್ಥಬರುತ್ತದೆ ಎಂದರು.
ಚಂದ್ರಶೇಖರ್ ಮಾತನಾಡಿ, ಮದುವೆ, ಮುಂಜಿ, ಹುಟ್ಟುಹಬ್ಬ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ದಿನದಂದು ಆಡಂಬರದ ಆಚರಣೆಗೆ ಕಡಿವಾಣ ಹಾಕಿ ಅಂಧಮಕ್ಕಳ ಶಾಲೆ, ವೃದ್ಧಾಶ್ರಮ, ಅನಾಥಾಲಗಳಿಗೆ ಕೈಲಾದ ಸಹಾಯ ಮಾಡಿದರೆ, ನೆಮ್ಮದಿ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷ ಜಾಕೀರ್, ಖಜಾಂಚಿ ಸಂಜಯ್, ಕುಮಾರ್, ಕಲ್ಯಾಣ್ ಕುಮಾರ್, ದೇವರಾಜ್, ತಿಮ್ಮೇಗೌಡ, ಬಾಲರಾಜ್ ಇತರರು ಹಾಜರಿದ್ದರು.