ಮುಂಬೈ (ಪಿಟಿಐ): ಭವಿಷ್ಯದಲ್ಲಿ ನೌಕಾ ಪಡೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಕೆ. ಧವನ್ ಹೇಳಿದರು.
ಇತ್ತೀಚೆಗೆ ನಡೆದಿರುವ ಎಲ್ಲಾ ದುರಂತಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ನೌಕಾ ಪಡೆಯು ಎಲ್ಲಾ ರೀತಿಯ ಕಾರ್ಯನಿರ್ವಹಣಾ ಮಾನದಂಡ ಪಾಲಿಸುತ್ತಿದೆ ಎಂದರು.
‘ಈಚೆಗೆ ಸಂಭವಿಸಿದ ದುರ್ಘಟನೆಗಳ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಸುರಕ್ಷತೆ ಬಗ್ಗೆ ನಿಗಾ ಇಡಲು ಪರಿಶೋಧನಾ ಸಂಸ್ಥೆಯನ್ನೂ ಸ್ಥಾಪಿಸಲಾಗಿದೆ’ ಎಂದು ಧವನ್ ತಿಳಿಸಿದರು.
ದುರ್ಘಟನೆಗಳ ತನಿಖಾ ಪ್ರಗತಿ ಬಗ್ಗೆ ಕೇಳಿದ್ದಕ್ಕೆ, ‘ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ದೃಢ ನಿರ್ಧಾರವನ್ನು ತನಿಖೆ ಮುಗಿಯುವುದಕ್ಕೂ ಮುನ್ನವೇ ನಾವು ಕೈಗೊಂಡಿದ್ದೆವು’ ಎಂದು ಧವನ್ ಉತ್ತರಿಸಿದರು.