ಜಮ್ಮು (ಪಿಟಿಐ): ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ದೇಶವು ವಿಳಂಬ ನೀತಿಯಿಂದ ತತ್ತರಿಸಿತ್ತು ಎಂದು ಟೀಕಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನರೇಂದ್ರ ಮೋದಿ ಅವರು ದೇಶವನ್ನು ನಿಷ್ಕ್ರಿಯದಿಂದ ಸಕ್ರಿಯ ಸ್ಥಿತಿಗೆ ತಂದಿದ್ದಾರೆ ಎಂದು ಹೊಗಳಿದ್ದಾರೆ.
‘ಯುಪಿಎ ಆಡಳಿತಾವಧಿಯಲ್ಲಿ ದೇಶದಲ್ಲಿ ನಿಷ್ಕ್ರಿಯ ನೀತಿಯ ಸ್ಥಿತಿ ಇತ್ತು. ರಕ್ಷಣಾ ಒಪ್ಪಂದದ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರವು ವರ್ಷಗಳೇ ತೆಗೆದುಕೊಂಡಿತು. ಆದರೆ, ಮೋದಿ ಅವರ ಒಂದು ವರ್ಷದ ಸರ್ಕಾರವು 40 ರಕ್ಷಣಾ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ’ ಎಂದು ನುಡಿದಿದ್ದಾರೆ.
ಅಲ್ಲದೇ, ‘ಕಳೆದೊಂದು ವರ್ಷದಲ್ಲಿ ದೇಶವು ನಿಷ್ಕ್ರಿಯ ಸ್ಥಿತಿಯಿಂದ ಸಕ್ರಿಯ ಸ್ಥಿತಿಗೆ ಬಂದಿದೆ. ನರೇಂದ್ರ ಮೋದಿ ಅವರ ಸರ್ಕಾರವು ಕಳೆದ ಹತ್ತು ವರ್ಷಗಳ ಕಾಲ ಮೌನ ಹಾಗೂ ನಿಷ್ಕ್ರಿಯ ಸ್ಥಿತಿಯಲ್ಲಿ ಇಲ್ಲ. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಚುರುಕಾಗಿದೆ’ ಎಂದು ಶ್ಲಾಘಿಸಿದ್ದಾರೆ.