ಹೊಸಪೇಟೆ: ‘ಈ ಬಾರಿ ‘ನಾಡೋಜ’ ಗೌರವಕ್ಕೆ ಕಲಬುರ್ಗಿಯ ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್, ಸಾಹಿತಿ ಹಾಗೂ ಕಲಾ ವಿಮರ್ಶಕ ಬೆಂಗಳೂರಿನ ಪ್ರೊ.ಎಂ.ಎಚ್. ಕೃಷ್ಣಯ್ಯ, ಸಾಹಿತಿ, ಪತ್ರಕರ್ತ ಎಸ್.ಆರ್. ರಾಮಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಹಿ.ಚಿ. ಬೋರಲಿಂಗಯ್ಯ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದೇ 6ರಂದು ಸಂಜೆ ವಿಶ್ವವಿದ್ಯಾಲಯದ ‘ನವರಂಗ’ ಬಯಲು ರಂಗಮಂದಿರದಲ್ಲಿ ನಡೆಯಲಿರುವ ನುಡಿಹಬ್ಬ (ಘಟಿಕೋತ್ಸವ) ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪ್ರದಾನ ಮಾಡಲಿದ್ದಾರೆ’ ಎಂದರು. ‘ವಿಶ್ರಾಂತ ಕುಲಪತಿ ಚಿದಾನಂದಗೌಡ ನೇತೃತ್ವದ ಸಮಿತಿ ‘ನಾಡೋಜ’ ಗಣ್ಯರ ಪಟ್ಟಿಯನ್ನು ಅಂತಿಮಗೊಳಿಸಿತ್ತು.
ಈ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಆಯಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಗುರುತಿಸಿ ಗೌರವ ಪದವಿ ಪ್ರದಾನ ಮಾಡಲು ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ’ ಎಂದು ಹೇಳಿದರು. ‘ಅಂಕಣಕಾರ, ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಶಿವಪ್ರಕಾಶ್ ನುಡಿಹಬ್ಬ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು.